ಮೋದಿಯ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸ್ವಂತ ಬಲದ ಮೇಲೆ 2014 ರಲ್ಲಿ ಅಧಿಕಾರಕ್ಕೆ ಬಂದಮೇಲೆ, ಆ ನಂತರ 2019 ರಲ್ಲಿ ಅತ್ಯಂತ ದ್ವೇಷಪೂರಿತ ಅಜೆಂಡಾಗಳನ್ನು ಮುಂದಿಟ್ಟುಕೊಂಡೆ ಮೊದಲಿಗಿಂತಲೂ ಹೆಚ್ಚಿನ ಬಲದ ಮೇಲೆ ಎರಡನೇ ಬಾರಿ ಸರ್ಕಾರ ರಚಿಸಿದ ನಂತರ ಭಾರತದ ಎಡ ಹಾಗೂ ಪ್ರಗತಿಪರ ವಲಯಗಳಲ್ಲಿ ಭಾರತದ ಪ್ರಭುತ್ವದ ಫ಼್ಯಾಶಿಸ್ಟ್ ಸ್ವರೂಪದ ಬಗ್ಗೆ ಮತ್ತು ಅದನ್ನು ಸೋಲಿಸಲು ಬೇಕಾದ ಕಾರ್ಯತಂತ್ರಗಳ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿದೆ. ಸರ್ಕಾರಗಳ ಮತ್ತು ಸಂಘಟನೆಗಳ ಅತ್ಯಂತ ಕ್ರೂರ ಹಾಗೂ ಸರ್ವಾಧಿಕಾರಿ ನಡೆಗಳನ್ನು ಬಿಡುಬೀಸಾಗಿ ಫ಼್ಯಾಶಿಸ್ಟ್ ಎಂದು ಕರೆಯುವ ಪ್ರವೃತ್ತಿ ಕನ್ನಡದ ರಾಜಕೀಯ ಬರಹಗಳಲ್ಲಿ ಸರ್ವೇ ಸಾಮಾನ್ಯ. ಹೀಗಾಗಿ ಫ಼್ಯಾಶಿಸಂ ಎಂಬುದು ಕ್ರೂರ ಸರ್ಕಾರಕ್ಕೆ ಅಥವಾ ಸರ್ಕಾರ ಕ್ರೌರ್ಯಕ್ಕೆ ಬಳಸುವ ಮತ್ತೊಂದು ನಾಮಪದ ಎಂಬ ತಿಳವಳಿಕೆಯೂ ಸಾಮಾನ್ಯವಾಗಿದೆ.
ಫ಼್ಯಾಶಿಸಂ ಎಂದರೆ ಕೇವಲ ಕ್ರೌರ್ಯವಲ್ಲ
ಫ಼್ಯಾಶಿಸಂ ಎಂಬುದು ಒಂದು ಪ್ರಜಾತಂತ್ರಕ್ಕೆ ಮತ್ತು ಮಾನವೀಯ ಸಹಬಾಳ್ವೆಗೆ ವ್ಯತಿರಿಕ್ತವಾಗಿ ಮುಂದಿಟ್ಟ ಒಂದು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ವ್ಯವಸ್ಥೆ. ಜಗತ್ತಿನ ಬಂಡವಾಳಶಾಹಿ ಆರ್ಥಿಕತೆ ಮತ್ತು ಬಂಡವಾಳಶಾಹಿ ಪ್ರಜಾತಂತ್ರ ಜಗತ್ತನ್ನೇ ಸೂರೆ ಹೊಡೆಯುವ ಪ್ರಕ್ರಿಯೆಯಲ್ಲಿ ಎದುರಾದ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಅದರೊಳಗಿಂದಲೇ ಹುಟ್ಟಿಕೊಂಡ ಒಂದು ದ್ವೇಷ ನಾಗರಿಕತೆಯ ಪರ್ಯಾಯ ವ್ಯವಸ್ಥೆ. ಹೀಗಾಗಿ ಫ಼್ಯಾಶಿಸಂ ಅನ್ನು ಒಂದು ಪಕ್ಷ ಅಥವಾ ಒಂದು ಸಂಘಟನೆಗೆ ಅಥವಾ ಅದು ಎಸಗಿದ ಅತಿರೇಕದ ಕ್ರೂರ ಘಟನಾವಳಿಗಳಿಗೆ ಸೀಮಿತ ಮಾಡಿ ನೋಡುವುದರಿಂದ ಫ಼್ಯಾಶಿಸಂನ ಅಪಾಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದು ಅಥವಾ ಬಲವಾದ ಫ಼್ಯಾಶಿಸ್ಟ್ ವಿರೋಧಿ ಜನಸಂಗ್ರಾಮವನ್ನೂ ಕಟ್ಟಿ ಸೋಲಿಸಲೂ ಆಗದು.
ಆ ಕಾಲ-ಆ ದೇಶಗಳ ಫ಼್ಯಾಶಿಸಂ
ಜಗತ್ತಿನ ಇತಿಹಾಸದಲ್ಲಿ ಮಾನವ ಕುಲವು ಫ್ಯಾಶಿಸ್ಟ್ ಗಂಡಾಂತರವನ್ನು ಮೊದಲು ಎದುರಿಸಿದ್ದು ಮೊದಲ ಮಹಾಯುದ್ಧದ ನಂತರದ 1925-45 ರ ಅವಧಿಯಲ್ಲಿ ಅವಧಿಯಲ್ಲಿ. ಮೊದಲ ಮಹಾಯುದ್ಧಾ ನಂತರದಲ್ಲಿ ಅಪಾರ ಆರ್ಥಿಕ ಬಿಕ್ಕಟ್ತು ಮತ್ತು ಸಾಮಾಜಿಕ ಸಂಕ್ಷೋಭೆಯನ್ನು ಎದುರಿಸುತ್ತಿದ್ದ ಇಟಲಿಯಲ್ಲಿ ಮುಸಲೋನಿಯ ನೇತೃತ್ವದಲ್ಲಿ ಫ಼್ಯಾಶಿಸ್ಟ್ ಪಕ್ಷವು, ಮತ್ತು ಯುದ್ಧದಲ್ಲಿ ಸೋತು ಅಪಮಾನ, ಅಪಾರ ನಿರುದ್ಯೋಗ, ಹಸಿವು , ಸಂಕ್ಷೋಭೆಯನ್ನು ಎದುರಿಸುತ್ತಿದ್ದ ಜರ್ಮನಿಯಲ್ಲಿ ಹಿಟ್ಲರನ ನಾಜಿ ಪಕ್ಷವು ಫ಼್ಯಾಶಿಸಂನ ಕ್ಲಾಸಿಕಲ್ ಉದಾಹರಣೆಗಳು.
ಇದಲ್ಲದೆ ಎರಡು ಮಹಾಯುದ್ಧಗಳ ನಡುವಿನ ಅವಧಿಯಲ್ಲಿ ಸ್ಪೇನ್ (ಸ್ಪೇನ್ ನ ಫ಼್ರಾಂಕೋ ಅತಿ ದೀರ್ಘ ಕಾಲ1939-75 ರ ವರೆಗೆ ಅಧಿಕಾರದಲ್ಲಿದ್ದ ಫ಼್ಯಾಶಿಸ್ಟ್. ಆದರೆ ಎರಡನೇ ಮಹಾಯುದ್ಧದ ನಂತರದ ಅವಧಿಯಲ್ಲಿ ಸ್ಪೇನಿನ ಫ಼್ಯಾಶಿಸಂ ರೂಪದಲ್ಲಿ ಹಲವು ಬದಲಾವಣೆ ಮಾಡಿಕೊಂಡಿತ್ತು), ಪೋರ್ಚ್ ಗಲ್ ಸೇರಿದಂತೆ ಇಂದಿನ ಯೂರೋಪಿನ ಹಲವಾರು ದೇಶಗಳಲ್ಲಿ ಹಾಗೂ ಲ್ಯಾಟಿನ್ ಅಮೆರಿಕಾದ ಹಲವಾರು ದೇಶಗಳಲ್ಲೂ ಫ಼್ಯಾಶಿಸಂ ಸಮಾಜವನ್ನು ಮತ್ತು ಕೆಲ ಕಾಲ ರಾಜಕೀಯ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿತ್ತು. ಮೊದಲ ಮಹಾಯುದ್ಧಾ ನಂತರದ ಘೋರ ಆರ್ಥಿಕ ಪರಿಸ್ಥಿತಿ ಮತ್ತು ಅಸ್ಥಿತ್ವದಲ್ಲಿದ್ದ ಪ್ರಜಾತಂತ್ರದ ಹೆಸರಿನ ಉದಾರವಾದಿ ಬಂಡವಾಳಶಾಹಿ ಸರ್ಕಾರಗಳ ಘೋರ ವೈಫಲ್ಯಗಳೂ ಕೂಡ ಈ ಫ಼್ಯಾಶಿಸ್ಟ್ ಶಕ್ತಿಗಳು ವೇಗವಾಗಿ ಜನಪ್ರಿಯಗೊಳ್ಳಲು ಮತ್ತು ಅಧಿಕಾರಕ್ಕೆ ಬರಲು ಕಾರಣವಾಯಿತು.
ಈ ಫ಼್ಯಾಶಿಸ್ಟ್ ಶಕ್ತಿಗಳು ಪ್ರಜಾತಂತ್ರ-ಚುನಾವಣೆ-ಉದಾರವಾದಿ ಸಾಮಾಜಿಕ ಮೌಲ್ಯಗಳ ಬದಲಿಗೆ ತಮ್ಮ ತಮ್ಮ ಪೂರ್ವಜರ ಫ಼್ಯೂಡಲ್ ಗತ ವೈಭವ, ಸಂಕುಚಿತ ದ್ವೇಷಕಾರಿ ಜನಾಂಗೀಯ ರಾಷ್ಟ್ರವಾದವನ್ನು ಸಮಾಜವಾದಿ ಪರಿಭಾಷೆಗಳೊಂದಿಗೆ ಬೆರೆಸಿ ಮುಂದಿಟ್ಟವು. ನಾಜಿ ಪಕ್ಷದ ಅರ್ಥವೇ ನ್ಯಾಷನಲ್ ಸೋಷಿಯಲಿಸಂ(ರಾಷ್ಟ್ರವಾದಿ ಸಮಾಜವಾದ) ಆಗಿತ್ತು. ಏಕೆಂದರೆ ಈ ಎಲ್ಲಾ ದೇಶಗಳಲ್ಲಿ ವಿವಿಧ ಬಗೆಯ ಸಮಾಜಾವಾದಿ ಜನಶಕ್ತಿಗಳಾದ ಕಮ್ಯುನಿಸ್ಟ್, ಅನಾರ್ಕಿಸ್ಟ್ ಮತ್ತಿತರರೂ ಕಾರ್ಮಿಕ ವರ್ಗದ ನಡುವೆ ಬಲಿಷ್ಟರಾಗಿದ್ದರೂ ಮತ್ತು ಬಂಡವಾಳಶಾಹಿ ಪ್ರಜಾತಂತ್ರದ ವಿರುದ್ಧ ನೈಜ ಸಮಾಜವಾದಿ ಅಜೆಂಡಾಗಳನ್ನಿಟ್ಟುಕೊಂಡು ಸಮರಶೀಲ ಹೋರಾಟ ನಡೆಸುತ್ತಿದ್ದರು ಮತ್ತು ಪ್ರಜಾತಂತ್ರದ ಚುನಾವಣೆಯ ಮಾದರಿಯಲ್ಲಿ ಅಧಿಕಾರವನ್ನು ಕೂಡ ಪಡೆದುಕೊಳ್ಳುವ ಹೊಸ್ತಿಲಲ್ಲಿದ್ದರು.
ಇದಲ್ಲದೆ 1917 ರಲ್ಲಿ ರಷ್ಯಾದಲ್ಲಿ ಕಾರ್ಮಿಕ ವರ್ಗವೇ ಕ್ರಾಂತಿಯನ್ನು ಸಂಪೂರ್ಣಗೊಳಿಸಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ವರ್ಗ ಸಮಾಜವಾದಿ-ಕಮ್ಯುನಿಸ್ಟ್ ಶಕ್ತಿಗಳಡಿಯಲ್ಲಿ ಸಂಘಟಿತವಾಗಿ ಬಂಡವಾಳಶಾಹಿಗೆ ದೊಡ್ಡ ಸಮಾಜವಾದಿ ಸವಾಲಾಗಿ ಬೆಳೆಯುತ್ತಿತ್ತು. ಇಂಥ ಸಂದರ್ಭದಲ್ಲಿ ಅತ್ಯಂತ ಬಿಕ್ಕಟ್ಟಿನಲ್ಲಿದ್ದ ಇಟಲಿ ಮತ್ತು ಜರ್ಮನಿಯ ಬಂಡವಾಳಶಾಹಿ ಆಳುವವರ್ಗಗಳು ಅಸ್ಥಿತ್ವದಲ್ಲಿದ್ದ ಉದಾರವಾದಿ ಪ್ರಜಾತಂತ್ರದ ವೈಫಲ್ಯವನ್ನು ಸಮಾಜವಾದಿ-ಕಮ್ಯುನಿಸ್ಟರು ಬಳಸಿಕೊಳ್ಳದಂತೆ ಮಾಡಲು ಫ಼್ಯಾಶಿಸ್ಟ್ ಶಕ್ತಿಗಳಿಗೆ ಮತ್ತು ಅದರ ಜನಾಂಗೀಯ ಶ್ರೇಷ್ತತೆ, ನರಮೇಧ, ಹಿಂಸಾಚಾರ, ಮತ್ತಿತರ ಉದಾರವಾದ ವಿರೋಧಿ ಮೌಲ್ಯಗಳಿಗೆ ತಾನೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮದ್ದತು ಕೊಡುತ್ತಾರೆ.
ಚುನಾವಣೆಗೆಯ ಮೂಲಕವೇ ಅಧಿಕಾರ ಹಿಡಿಯಲು ಪೂರಕವಾಗುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಈ ಫ಼್ಯಾಶಿಸ್ಟರು ಸಮಾಜದಲ್ಲಿ ಪ್ರಬಲವಾಗಿದ್ದ ಕಮ್ಯುನಿಸ್ಟರನ್ನು ಮತ್ತು ಸಮಾಜವಾದಿಗಳನ್ನು ಭೀಕರವಾಗಿ ಕೊಂದು ಹಾಕುತ್ತಾರೆ. ನಂತರ ಹಂತಹಂತವಾಗಿ ತಮ್ಮ ಪಕ್ಷದೊಳಗಿದ್ದ ಕಾರ್ಮಿಕ ಹಿನ್ನೆಲೆಯ ಬಂಡವಾಳಶಾಹಿ ವಿರೋಧಿ ಸದಸ್ಯಗಣವನ್ನು ಹತ್ಯೆ ಮಾಡಿ ಖುಲ್ಲಂಖುಲ್ಲ ಬಂಡವಾಳಶಾಹಿಗಳ ಆಸಕ್ತಿಯ ವಿಸ್ತರಣೆಗೆ ದಾರಿ ಸುಗಮಗೊಳಿಸುತ್ತಾರೆ. ತಮ್ಮ ಈ ಕ್ರೌರ್ಯಕ್ಕೆ ಸಾಮಾಜಿಕ ತಳಹದಿ ಒದಗಿಸಿಕೊಳ್ಳಲು ಯೆಹೂದಿ ವಿರೋಧಿ ಕಮ್ಯುನಿಸ್ಟ್ ಮತ್ತು ವೈಚಾರಿಕತೆ ವಿರೋದಿ ದ್ವೇಷ ರಾಜಕಾರಣವನ್ನು ರಾಷ್ಟ್ರೀಯ ಮೌಲ್ಯಗಳನ್ನಾಗಿ ಪ್ರಚಾರ ಮಾಡುತ್ತಾರೆ. ಹಿಟ್ಲರ್ ಮತ್ತು ಮುಸಲೋನಿ ಒಟ್ಟು ಸೇರಿ ಎರಡನೇ ಮಹಾಯುದ್ಧಕ್ಕೋ ಕಾರಣರಾಗುತ್ತಾರೆ.
ಉದಾರವಾದಿ ಪ್ರಜಾತಂತ್ರದ ಫ಼್ಯಾಶಿಸ್ಟ್ ಮೋಹ
ತಮ್ಮ ತಮ್ಮ ದೇಶಗಳ ಮೇಲೆ ಹಿಟ್ಲರ್ ದಾಳಿ ಮಾಡುವ ತನಕವೂ ಅಮೆರಿಕ, ಬ್ರಿಟನ್ ಮತ್ತು ಫ಼್ರಾನ್ಸಿನ ತಥಾಕಥಿತ ಉದಾರವಾದಿ ಪ್ರಜಾತಂತ್ರವಾದಿ ಸರ್ಕಾರಗಳು ಹಿಟ್ಲರನ ಫ಼್ಯಾಶಿಸಮ್ಮಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಅಂತಿಮವಾಗಿ ಈ ಫ಼್ಯಾಶಿಸಮ್ಮನ್ನು ಸೋಲಿಸುವುದು ಸೋವಿಯತ್ ರಷ್ಯಾದ ಕಾರ್ಮಿಕ ವರ್ಗದ ಕೆಂಪು ಸೈನ್ಯ ಮತ್ತು ಅದರ ಜೊತೆಗೂಡಿ ಯುದ್ಧ ಸಾರಿದ ಪೂರ್ವ ಯೂರೋಪ್ ದೇಶಗಳ ಫ಼್ಯಾಶಿಸ್ಟ್ ವಿರೋಧಿ ಕ್ರಾಂತಿ ಪಡೆಗಳು. ಯುದ್ಧದಲ್ಲಿ ಫ಼್ಯಾಶಿಸ್ಟ್ ಜರ್ಮನಿ ಸೋತರೂ, ರಣರಂಗದಿಂದ ಪಲಾಯನ ಮಾಡಿದ ಸಾವಿರಾರು ಕೊಲೆಗಡುಕ ಫ಼್ಯಾಶಿಸ್ಟರನ್ನು “ಪ್ರಜಾತಂತ್ರವಾದಿ” ಅಮೆರಿಕ ಮತ್ತು ಪಶ್ಚಿಮ ಯೂರೋಪ್ ದೇಶಗಳು ಮತ್ತು ಅರ್ಜೆಂಟಿನಾ ದೇಶಗಳು ರಾಷ್ಟ್ರೀಯವಾದಿಗಳೆಂದು ಪುರಸ್ಕರಿಸಿ ತಮ್ಮತಮ್ಮ ದೇಶಗಳಲ್ಲಿ ಪುನರ್ವಸತಿ ಮಾಡಿಕೊಡುತ್ತವೆ. ಅರ್ಥಾತ್ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಹಾಗೂ ಸಮಾಜವಾದಿ ಸವಾಲನ್ನು ಎದುರಿಸಬೇಕಾದ ಸಂದರ್ಭದಲ್ಲಿ ಫ಼್ಯಾಶಿಸಂ ಅನ್ನು ತನ್ನ ರಿಜರ್ವ್ ರಾಜಕೀಯ ಸಾಧನವನ್ನಾಗಿ ಕಾಪಾಡಿಕೊಳ್ಳುತ್ತಾರೆ. ಏಕೆಂದರೆ 1957 ರಲ್ಲಿ ಫ಼್ರಾನ್ಸಿನ ಸಂದರ್ಭದಲ್ಲಿ ಜೀನ್ ಪಾಲ್ ಸಾರ್ತ್ ಹೇಳಿದಂತೆ ಫ಼್ಯಾಶಿಸ್ಟರು ಹುಟ್ಟಿ ಬೆಳೆಯುವ ಸಾಮಾಜಿಕ ಆರ್ಥಿಕ ಸಂದರ್ಭ ಇರುವಷ್ಟು ಕಾಲ ಫ಼್ಯಾಶಿಸಂ ಸೋಲುವುದಿಲ್ಲ.
ಹೀಗಾಗಿ ಫ಼್ಯಾಶಿಸಂ ಎಂಬುದು ಕೇವಲ ಸಾಮಾಜಿಕ ಅಥವಾ ಸಾಂಸ್ಕೃತಿಕ ಅತಿರೇಕದ ವಿದ್ಯಮಾನವಲ್ಲ. ಅದು ಅಸ್ಥಿತ್ವದಲ್ಲಿರುವ ಪ್ರಜಾತಾಂತ್ರಿಕ ವ್ಯವಸ್ಥೆಯು ಆಳುವವರ್ಗವನ್ನು ರಾಜಕೀಯ-ಸಾಮಾಜಿಕ ಬಿಕ್ಕಟ್ಟಿನಿಂದ ಪಾರು ಮಾಡಲಾಗದಾಗ ಬಳಸುವ ಪರ್ಯಾಯ ವಿದ್ಯಮಾನ. ಅದಕ್ಕೆ ಸಾಧನವಾಗುವುದು ಸಮಾಜದ ಅತ್ಯಂತ ಪ್ರತಿಗಾಮಿ ಶಕ್ತಿಗಳು. ಈ ಪ್ರತಿಗಾಮಿ ಶಕ್ತಿಗಳು, ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ತ್ರಸ್ತರಾದ ಜನರ ಸಾಮಾಜಿಕ ಸಂಕ್ಷೋಭೆಯನ್ನು ಬಳಸಿಕೊಂಡು ಬೆಳೆಯುವ, ಅತ್ಯಂತ ಅಪಾಯಕಾರಿ ಶಕ್ತಿಗಳಾಗಿವೆ. ಅವುಗಳು ಜನರಲ್ಲಿ ಒಂದು ತಳಹದಿ ಮಾಡಿಕೊಂಡು ಸಾಮಾಜಿಕ ಶಕ್ತಿಯಾಗಿ ಬೆಳದ ನಂತರ ಉದಾರವಾದಿ ಬಂಡವಾಳಶಾಹಿ ಆಳುವವರ್ಗಗಳೇ ಅದರ ಬೆಂಬಲಕ್ಕೆ ನಿಂತು ಅಧಿಕಾರಕ್ಕೆ ಬರಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಉದಾರವಾದಿ ಬಂಡವಾಳಶಾಹಿ ವರ್ಗ ಫ಼್ಯಾಶಿಸ್ಟ್ ವಿರೋಧಿ ಸಂಗ್ರಾಮದಲ್ಲಿ ಎಂದಿಗೂ ವಿಶ್ವಾಸಾರ್ಹ ಸ್ನೇಹಿತನಲ್ಲವೆಂಬುದು ಇತಿಹಾಸದ ಒಂದು ಪಾಠ.
ಫ಼್ಯಾಶಿಸಂ- ಸಾರ ಒಂದೇ ಆದರೂ ರೂಪ ಹಲವು
ರಾಬರ್ಟ್ ಗ್ರಿಫ಼ಿನ್ ಅವರು ತಮ್ಮ “Anatomy Of Fascism” ಪುಸ್ತಕದಲ್ಲಿ ಜಗತ್ತಿನ ಎಲ್ಲಾ ಫ಼್ಯಾಶಿಸ್ಟರ ಸಿದ್ಧಾಂತ “palingenetic ultranationalism”- ಪುನರುತ್ಥಾನವಾದಿ ಉಗ್ರ ರಾಷ್ಟ್ರವಾದ- ಎಂದು ಬಣ್ಣಿಸುತ್ತಾರೆ. ಇದರ ಅತ್ಯುಗ್ರ ಅಭಿವ್ಯಕ್ತಿ ಹಿಟ್ಲರ್ 1943-45 ರ ನಡುವೆ ನಡೆಸಿದ 60 ಲಕ್ಷ ಯೆಹೂದಿಗಳ ಭೀಕರ ನರಮೇಧ. ಆದರೆ ಒಂದು ಪ್ರಭುತ್ವ ಅಥಾವಾ ದೇಶವನ್ನು ಫ಼್ಯಾಶಿಸ್ಟ್ ಎಂದು ಕರೆಯಲು ಉಗ್ರ ನರಮೇಧ ನಡೆಯ ಬೇಕಿರುವುದು ಕಡ್ಡಾಯವೇನಾಲ್ಲ. ಹಾಗೇ ನೋಡಿದರೆ ಸ್ಪೇನಿನ ಫ಼್ರಾಂಕೋನ ಫ಼್ಯಾಶಿಸ್ಟ್ ಸರ್ವಾಧಿಕಾರವನ್ನು ಬಿಟ್ಟರೆ ಇಟಲಿ ಮತ್ತು ಜರ್ಮನ್ ಬಗೆಯ ಅತ್ಯುಗ್ರ ಫ಼್ಯಾಶಿಸ್ತ್ ಸರ್ವಾಧಿಕಾರಗಳು 10-20 ವರ್ಷಕ್ಕಿಂತ ಹೆಚ್ಚು ನಿರಂತರವಾಗಿ ಅಧಿಕಾರದಲ್ಲಿರಲಿಲ್ಲ. 1923-45 ರ ನಡುವೆ ಜಗತ್ತಿನ ಕನಿಷ್ಟ 26 ದೇಶಗಳಲ್ಲಿ ಫ಼್ಯಾಶಿಸ್ಟ್ ಎಂದು ಕರೆಯಬಹುದಾದ ವಿವಿಧ ಸ್ವರೂಪದ ಜನ ಸಂಘಟನೆ , ಜನ ಚಳವಳಿ ಮತ್ತು ಸರ್ಕಾರಗಳು ತಾತ್ಕಾಲಿಕವಾಗಿ ಅಥವಾ ಹೆಚ್ಚುಕಾಲ ಅಧಿಕಾರದಲ್ಲಿದ್ದವು.. ಅಲ್ಲೆಲ್ಲಾ ಉದಾರವಾದಿ ಪ್ರಜಾತಂತ್ರ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಲಿ ನಡೆದು ಉನ್ಮತ್ತ ಬಹುಸಂಖ್ಯಾತ ಜನಸಮುದಾಯದ ಬೆಂಬಲದೊಂದಿಗೆ ಅತ್ಯಂತ ಪ್ರತಿಗಾಮಿ ಬಂಡವಾಳಶಾಹಿಗಳು ಅಧಿಕಾರಕ್ಕೆ ಬಂದರೇ ವಿನಾ ಹಿಟ್ಲರ್ ರೀತಿಯ ನರಮೇದಗಳನ್ನೇನು ನಡೆಸಿರಲಿಲ್ಲ. ನರಮೇಧಗಳನ್ನು ನಡೆಸಲಿಲ್ಲ ಎಂದ ಮಾತ್ರಕ್ಕೆ ಅವುಗಳನ್ನು ಫ಼್ಯಾಶಿಸ್ಟ್ ಅಲ್ಲ ಎಂದು ಹೇಳಲಾಗುವುದಿಲ್ಲ. ಅದೇರೀತಿ ಆ ಕಾಲಘಟ್ಟದಲ್ಲಿ ಆಯಾ ದೇಶಗಳ ಸಮಾಜವನ್ನೇ ಫ಼್ಯಾಶಿಸ್ಟ್ ಚಿಂತನೆಯೆಂದ ಅಲ್ಲೋಲ ಕಲ್ಲೋಲ ಮಾಡಿದ ಕೆಲವು ಫ಼್ಯಾಶಿಸ್ಟ್ ಚಳವಳಿಗಳು ಅಧಿಕಾರಕ್ಕೆ ಬರದೇ ಸೋತವು. ಸ್ಯಯಂ ಫ಼್ರಾನ್ಸೇ ಅದಕ್ಕೊಂದು ಉದಾಹರಣೆ.
ಹಾಗೆಯೇ ಸ್ವಯಂ ಹಿಟ್ಲರ್ ಕೂಡ 1934 ರಲ್ಲಿ ಅಧಿಕಾರಕ್ಕೆ ಬಂದ ನಂತರ ಹಂತಹಂತವಾಗಿ ತನ್ನ ಫ಼್ಯಾಶಿಸ್ಟ್ ಕ್ರಮಗಳನ್ನು ಜಾರಿಗೊಳಿಸಿದ. ಇತರ ರಾಜಕೀಯ ಪಕ್ಷಗಳನ್ನು ಬಹಳ ಬೇಗ ನಿಶೇಧಗೊಳಿಸಿದರೂ ಸಮಾಜದೊಳಗೆ ಯೆಹೂದಿ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕ್ರಮಗಳನ್ನು ಜಾರಿಗೊಳಿಸಿದ್ದು ತಡವಾಗಿ ಮತ್ತು ಹಂತಹಂತವಾಗಿ. 1938 ರಲ್ಲೂ ಕೂಡ ಯೆಹೂದಿಗಳ ನರಮೇಧ ಅಜೆಂಡಾದಲ್ಲಿ ಇರಲಿಲ್ಲ. ಬದಲಿಗೆ ಯೆಹೂದಿಗಳನ್ನು ಮೆಡಗಾಸ್ಕರ್ ಗೆ ಅನಾಮತ್ತು ವರ್ಗಾಯಿಸಬೇಕೆಂಬ ಯೋಜನೆಯಿತ್ತು. ಮೇಲಾಗಿ ಎರಡನೆ ಮಹಾಯುದ್ಧವನ್ನು ಪ್ರಾರಂಭಿಸಿದ ಮೇಲೆ ಇಡೀ ಸಮಾಜ ಮತ್ತು ಆರ್ಥಿಕತೆ ಯುದ್ಧೋನ್ಮೂಖವಾಗಿದ್ದೂ ಕೂಡ ಒಂದು ಅಸಾಮಾನ್ಯ ಸಂದರ್ಭವನ್ನು ಜರ್ಮನ್ ಫ಼್ಯಾಶಿಸ್ಟರ ಮುಂದಿರಿಸಿತ್ತು. ಮತ್ತೊಂದು ಕಡೆ ಯುದ್ಧದಲ್ಲಿ ಸೋಲುಗಳು ಕಾಣತೊಡಗಿದೊಡನೆ ಇಟಲಿಯಲ್ಲಿ ಮುಸಲೋನಿಯ ವಿರುದ್ಧ 1943 ರಲ್ಲಿ ಇಟಲಿಯ ವಿವಿಧ ಶಕ್ತಿಗಳೇ ಬಂಡಾಯ ಹೂಡಿ ಫ಼್ಯಾಶಿಸಂ ಅನ್ನು ಅಧಿಕಾರದಿಂದ ಕಿತ್ತೊಗೆದು ಜೈಲಿಗೆ ದೂಡಿದರು. ನಂತರ ಹಿಟ್ಲರ್ ಆತನನ್ನು ಸೆರೆಯಿಂದ ಬಚಾವು ಮಾಡಬೇಕಾಯಿತು. ಇದು ಫ಼್ಯಾಶಿಸಂ ನ ಒಂದು ಸಂಕ್ಷಿಪ್ತ ಇತಿಹಾಸ. ಇಪ್ಪತ್ತನೇ ಶತಮಾನದಲ್ಲಿ ಮತ್ತು ಯುರೋಪಿನ ನಿರ್ದಿಷ್ಟ ಸಂದರ್ಭದಲ್ಲಿ ಕ್ಲಾಸಿಕಲ್ ಫ಼್ಯಾಶಿಸಂ ಹುಟ್ಟಿ, ಬೆಳೆದು ಮತ್ತು ಸೋತ ಸಂದರ್ಭ.
ಭಾರತೀಯ ಫ಼್ಯಾಶಿಸಂ
ಇಂದು ಜಗತ್ತು ಮತ್ತು ಭಾರತ ಮತ್ತೊಮ್ಮೆ ಫ಼್ಯಾಶಿಸ್ಟ್ ಅಪಾಯವನ್ನು ಎದುರಿಸುತ್ತಿದೆ. ಹೀಗಾಗಿ ಇತಿಹಾಸದಿಂದ ಅನುಭವದಿಂದ ಹಲವು ಪಾಠಗಳನ್ನು ಕಲಿತರೂ ಸಮಕಾಲೀನ ಕಾಲ ಮತ್ತು ದೇಶದಲ್ಲಿ ಫ಼್ಯಾಶಿಸಂ ನ ಹೊಸ ರೂಪ ಮತ್ತು ಸಾರಗಳ ಬಗ್ಗೆಯೂ ಸ್ಪಷ್ಟ ಗ್ರಹಿಕೆಯ ಅಗತ್ಯವಿದೆ. ಭಾರತದ ಪ್ರಕ್ಯಾತ ಎಡಪಂಥೀಯ ಚಿಂತಕ ಐಜಾಜ್ ಅಹ್ಮದ್ ಹೇಳುವಂತೆ every country gets fascism it deserves – ಪ್ರತಿಯೊಂದು ದೇಶವು ತಾನು ಎಂಥ ಫ಼್ಯಾಶಿಸಂ ಪಡೆಯಲು ಅರ್ಹವೋ ಅಂಥಾ ಫ಼್ಯಾಶಿಸಂ ಪಡೆಯುತ್ತದೆ.
ಸಮಕಾಲೀನ ಸಂದರ್ಭದಲ್ಲಿ ಭಾರತದ ಮಾತ್ರವಲ್ಲ ಜಗತ್ತಿನ ಯಾವುದೇ ದೇಶದಲ್ಲಿ ಇಪ್ಪತ್ತನೇ ಶತಮಾನದಲ್ಲಿ ಯುರೊಪು ಕಂಡ ಫ಼್ಯಾಶಿಸಂ ಯಥಾವತ್ ಪುನರಾವರ್ತಿಸುವುದಿಲ್ಲ. ಆದರೆ ಸಾರ ಒಂದೇ- ಪ್ರಜಾತಂತ್ರ ಸಮಾಜದ ನಾಶ ಮತ್ತು ಶೋಷಿತ ಜನರ ಸಮ್ಮತಿಯೊಂದಿಗೆ ಆಳುವ ವರ್ಗಗಳ ಅತ್ಯಂತ ನಗ್ನ ಭಯೋತ್ಪಾದಕ ಸರ್ವಾಧಿಕಾರ. ಆದರೆ ರೂಪ- ಈ ದೇಶ ಮತ್ತು ಈ ಕಾಲದಲ್ಲಿ ಬೇರೆ ಇರುತ್ತದೆ. ಹೀಗಾಗಿ ಒಂದು ದೇಶ ಫ಼್ಯಾಶಿಸ್ಟ್ ಆಗಿದೆಯೋ ಇಲ್ಲವೋ ಎಂಬುದಕ್ಕೆ ಸಾರವು ಮಾನದಂಡವಾಗಿರಬೇಕೆ ವಿನಃ ರೂಪವಲ್ಲ.
ಆದರೆ ಇಂದಿನ ಕಾಲ ಮತ್ತು ಸಂದರ್ಭ 1923-39 ರ ನಡುವಿನ ಮಹಾಯುದ್ಧಗಳ ನಡುವಿನ ಸಂದರ್ಭಕ್ಕಿಂತ ಭಿನ್ನವಾಗಿದೆ. ಅಲ್ಲದೆ ಎರಡನೇ ಮಹಾಯುದ್ಧಾನಂತರ, 1923 ರ ಸಂದರ್ಭಕ್ಕೆ ಹೋಲಿಸಿದರೆ ರೂಪಮಾತ್ರದಲ್ಲಾದರೂ ಬಂಡವಾಳಶಾಹಿ ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆ ಜಗತ್ತಿನ ಬಹುಪಾಲು ದೇಶಗಳಲ್ಲಿ ಬೇರೂರಿದೆ. ಭಾರತದಲ್ಲೂ ಬಹುಪಕ್ಷೀಯ ಪ್ರಜಾತಂತ್ರ ಇಲ್ಲಿನ ಸಾಮಾಜಿಕ ಶ್ರೇಣೀಕರಣ್ ವ್ಯವಸ್ಥೆಯ ಮೇಲೆ ತಂದು ಸುರಿದಿರುವ ಎರೆಮಣ್ಣಷ್ಟೇ ಆಗಿದೆ. ಅದು ಕಳೆದ 75 ವರ್ಷಗಳಲ್ಲಿ ಬೇರನ್ನೇ ಬಿಡದಿರುವುದರಿಂದ ಇಲ್ಲಿಯ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ, ಫ಼್ಯಾಶಿಸ್ಟ್ ಕ್ರೌರ್ಯವೇ ಆಗಿರುವ ಜಾತಿ ಕ್ರೌರ್ಯ ಮತ್ತು ಜಾತಿ ಮೇಲರಿಮೆಗಳನ್ನು ಮತ್ತದರ ಹಿಂಸಾಚಾರಗಳನ್ನು ಹಿಂದೂ ನಾಗರಿಕತೆಯ ಅಂತರ್ಗತ ಭಾಗವನ್ನಾಗಿ ಮಾಡಿಬಿಟ್ಟಿದೆ.
ಹಾಗೆಯೇ 1991 ರ ನಂತರ ಭಾರತದ ಆಳುವವರ್ಗವು ಸರ್ವಸಮ್ಮತಿಯಿಂದ ಒಪ್ಪಿಕೊಂಡ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಕಳೆದ 35 ವರ್ಷಗಳಲ್ಲಿ ಸಮಾಜವನ್ನು ಅತಂತ್ರಗೊಳಿಸಿ ಭೀಕರ ಸಾಮಾಜಿಕ ಮತ್ತು ಆರ್ಥಿಕ ಸಂಕ್ಷೋಭೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಬಹುಪಾಲು ಪ್ರಜಾತಂತ್ರಗಳು ಆ ಕಾರಣದಿಂದಲೇ ಸರ್ವಾಧಿಕಾರಗಳಾಗುತ್ತಿವೆ. ಭಾರತವು ಫ಼್ಯಾಶಿಸಂ ಘಟ್ಟ ತಲುಪಿದೆಯೋ ಇಲ್ಲವೋ ಎಂಬುದಕ್ಕೆ ಅದರ ಅತ್ಯಂತ ಅತಿರೇಕದ ಉದಾಹರಣೆಯಾದ ನರಮೇಧಗಳ ಸಾಧ್ಯತೆಯನ್ನೇ ಗಮನಿಸೋಣ:
ನಾಗರಿಕ ಸಮಾಜ ನರಭಕ್ಷಕ ಸಮಾಜವಾಗುವ ಹತ್ತು ಹಂತಗಳು:
ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊಫೆಸರ್. ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ:
1.Classification -ಅನ್ಯ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ
2.Symbolisation : ಆ ಗುಂಪಿನ ಚಹರೆಗಳ ಪಟ್ಟಿಕರಣ
3.Discrimination – ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು
4.Dehumanisation – ಆ ಗುಂಪನ್ನು ಅಪಮಾನಿಸುತ್ತಾ ಮಾನವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು
5.Organisation – ಈ ತಾರತಮ್ಯ, ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು
6.Polarisation – ಇವುಗಳ ಆಧಾರದ ಮೇಲೆ ನಾವೂ – ಅವರು ಎಂದು ಸಮಾಜವನ್ನು ಧುವೀಕರಿಸುವುದು
7.Preparation : ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು
8.Parsecution : ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು.
9.Extermination – ಸಾಮೂಹಿಕ ಕಗ್ಗೊಲೆ
10.Denial- ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತದೆ.
ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಗಳ ಪ್ರಕ್ರಿಯೆಗಳೂ ಕಾಣಿಸಬಹುದು.
ಮೋದಿ ನಂತರದ ಭಾರತೀಯ ಸಮಾಜದಲ್ಲಿ ಮೇಲಿನ ಹತ್ತೂ ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಸಾಗುತ್ತಿವೆ. ನಾಗರಿಕ ಸಮಾಜವನ್ನು ಮೃಗೀಯಗೊಳಿಸುತ್ತಿದೆ ಮುಸ್ಲಿಮರನ್ನು ಅನ್ಯೀಕರಣಗೊಳಿಸುತ್ತಾ, ದಲಿತ-ಶೂದ್ರ ಸಮುದಾಯವನ್ನು ಅಮಾನ್ಯಗೊಳಿಸುತ್ತಾ ಸಾಂಸ್ಕೃತಿಕ-ರಾಜಕೀಯ ನರಮೇಧಗಳನ್ನು ನಡೆಸುತ್ತಿದೆ. ಇತರ ಪಕ್ಷಗಳು ಅಧಿಕಾರಕ್ಕೆ ಬಂದರೂ ಈ ಯಾವ ಪ್ರಕ್ರಿಯೆಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿಯೇ ಪ್ರೊ,. ಗ್ರೆಗೋರಿ ಅವರ ಪ್ರಕಾರ ಭಾರತ ಇಂದು ನರಮೇಧದ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ.
ಸುಸ್ಥಿರ ಭಾರತೀಯ ಫ಼್ಯಾಶಿಸಂ? ಮತ್ತು ಸುಸ್ಥಿರ ಸಮಾಜವಾದಿ ಸಂಗ್ರಾಮ
ಈ ಹಿನ್ನೆಲೆಯಲ್ಲಿ ಭಾರತದ ಫ಼್ಯಾಶಿಸಂನ ಸಾರ-ರೂಪಗಳ ಚರ್ಚೆಯನ್ನು ಗಮನಿಸಿದಾಗ ಕೆಲವು ಸ್ಪಷ್ಟತೆಗಳು ಅಗತ್ಯವಾಗಿವೆ. ಕ್ಲಾಸಿಕಲ್ ಫ಼್ಯಾಶಿಸಂಗೆ ಹೋಲಿಸಿದಾಗ ಪ್ರಧಾನವಾಗಿ
ಭಾರತದ ಫ಼್ಯಾಶಿಸ್ಟ್ ಶಕ್ತಿಗಳು
1) ಪ್ರಜಾತಂತ್ರವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಾಗಿಲ್ಲ ಹಾಗೂ
2) ಫ಼್ಯಾಶಿಸ್ಟೇತರ ಪಕ್ಷಾಗಳಿಗೆ ಮತ್ತು ಹಾಲಿ ಇರುವ ಬಂಡವಾಳಶಾಹಿ ಪ್ರಜಾತಂತ್ರಕ್ಕೆ ಫ಼್ಯಾಶಿಸಂ ಅನ್ನು ವಿರೋಧಿಸುವ ಚೈತನ್ಯವಿದೆ ಮತ್ತು
3) ಫ಼್ಯಾಶಿಸ್ಟ್ ಸಂಘ ಪರಿವಾರವು ಇನ್ನು ಪ್ರಭುತ್ವನ್ನು ಇಡಿಯಾಗಿ ಆಕ್ರಮಿಸಿಲ್ಲ.. ಆದ್ದರಿಂದ ಭಾರತವು ನವ ಫ಼್ಯಾಶಿಸ್ಟ್ ಅಪಾಯವನ್ನು ಎದುರಿಸುತ್ತಿದೆಯೇ ವಿನಾ ಫ಼್ಯಾಶಿಸ್ಟ್ ಆಗಿಯೇ ಬಿಟ್ಟಿಲ್ಲ ಎಂಬ ತರ್ಕಗಳು ಇವೆ.
ಫ಼್ಯಾಶಿಸಂನ ಸ್ವರೂಪವನ್ನು ಫ಼್ಯಾಶಿಸ್ಟ್ ಸಿದ್ಧಾಂತ, ಫ಼್ಯಾಶಿಸ್ಟ್ ಚಳವಳಿ ಮತ್ತು ಫ಼್ಯಾಶಿಸ್ಟ್ ಅಧಿಕಾರವೆಂಬ ಮೂರು ಸ್ಥರಗಳಲ್ಲಿ ಸಾಮಾನ್ಯವಾಗಿ ಚರ್ಚಿಸಲಾಗುತ್ತದೆ.
ಇದರಲ್ಲಿ ಸಂಘಪರಿವಾರ ಮತ್ತು ಅದರ ಹಿಂದೂ ರಾಷ್ಟ್ರ ಸಿದ್ಧಾಂತ ಕ್ಲಾಸಿಕಲ್ ಫ಼್ಯಾಶಿಸಂ ಸಿದ್ಧಂತದಿಂದಲೇ ಪ್ರಭಾವಿತವಾದ ಫ಼್ಯಾಶಿಸ್ಟ್ ಸಿದ್ಧಾಂತ ಎಂಬುದರಲ್ಲಿ ಯಾರಿಗೂ ಭಿನಾಭಿಪ್ರಾಯವಿಲ್ಲ. ಆದರೆ ಬೇರೇ ಐರೋಪ್ಯ ಫ಼್ಯಾಶಿಸ್ಟರಿಗಿಂತ ಭಿನ್ನವಾಗಿ ಈ ಫ಼್ಯಾಶಿಸ್ಸ್ಟ್ ಸಿದ್ಧಾಂತಕ್ಕೆ ಭಾರತದ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಸಾಮಾಜಿಕ ನೆಲೆಯನ್ನು ಒದಗಿಸಿಕೊಡುತ್ತದೆ ಎಂಬುದಕ್ಕೆ ಹಾಗೂ ಭಾರತದ ಎಲ್ಲಾಅ ಪ್ರಜಾತಾಂತ್ರಿಕ ಪಕ್ಷಗಳು ಇದೇ ಫ಼್ಯಾಶಿಸ್ಟ್ ಬೇರುಗಳನ್ನು ಹೊಂದಿವೆ ಎಂಬುದದರ ಬಗ್ಗೆ ಭಾರತೀಯ ಫ಼್ಯಾಶಿಸ್ಟ್ ವಿರೋಧಿ ಶಕ್ತಿಗಳು ಹೆಚ್ಚು ಗಮನ ಕೊಟ್ಟಂತೆ ಕಾಣುವುದಿಲ್ಲ. ಆದ್ದರಿಂದ ಉಳಿದ ಪ್ರಜಾತಾಂತ್ರಿಕ ಪಕ್ಷಗಳ ಫ಼್ಯಾಸಿ ವಿರೋಧದ ಟೊಳ್ಳುತನವನ್ನು ಗಮನಿಸುತ್ತಿಲ್ಲ.
ಎರಡನೆಯದಾಗಿ 1925 ರಲ್ಲಿ ಹುಟ್ಟಿದ ಫ಼್ಯಾಶಿಸ್ಟ್ ಆರೆಸ್ಸೆಸ್ ಜಗತ್ತಿನ ಅತಿ ದೀರ್ಘವಾದ ಫ಼್ಯಾಶಿಸ್ಟ್ ಚಳವಳಿ ಎಂಬುದನ್ನು ಕೂಡ ಯಾರೂ ಅಲ್ಲಗೆಳೆಯುವುದಿಲ್ಲ. ಆದರೆ 1945 ರ ನಂತರ ಜಾಗತಿಕ ಮತ್ತು ಭಾರತೀಯ ಸಂದರ್ಭದಲ್ಲಿ ಅದರಲ್ಲೂ 1991 ರ ನಂತರದ ಸಂದರ್ಭದಲ್ಲಿ ಭಾರತೀಯ ಫ಼್ಯಾಶಿಸಂ ಮತ್ತು ಕಾರ್ಪೊರೇಟ್ ಶಕ್ತಿಗಳು ಜೊತೆಗೂಡಿ ಬಂಡವಾಳ ಶಾಹಿ ಚುನಾವಣಾ ರಾಜಕಾರಣದ ರೂಪವನ್ನು ಉಳಿಸಿಕೊಂಡು ಸಾರದಲ್ಲಿ ಫ಼್ಯಾಸೀಕರಿಸುವುದರಲ್ಲಿ ಯಸ್ವಿಯಾಗಿದೆ ಎಂಬುದನ್ನು ಕಡೆಗಣಿಸುತ್ತಿವೆ. ವರ್ತಮಾನದ ಭಾರತದ ಮತ್ತು ಇತರ ದೇಶಗಳಲ್ಲಿ ಸಂಭವಿಸುತ್ತಿರುವ ಅತ್ಯಂತ ಕುತೂಹಲಕರ ಸಂಗತಿಯೆಂದರೆ ಉಗ್ರ ಬಲಪಂಥೀಯ ಶಕ್ತಿಗಳಿಗೆ ಸ್ಥಾಪಿತ ಉದಾರವಾದಿ ಪ್ರಜಾತಂತ್ರದ ಸಂಸ್ಥೆಗಳ ಜೊತೆಗೆ ಸಂಘರ್ಶದ ಬದಲಿಗೆ ಹಿತವಾದ ಮೈತ್ರಿ ಏರ್ಪಟ್ಟಿರುವುದು!
ನವಉದಾರವಾದದ ರಾಜಕೀಯದ ಉದ್ದೇಶಗಳಿಗೂ ಮತ್ತು ಉಗ್ರ ಬಲಪಂಥದ ರಾಜಕೀಯ ಉದ್ದೇಶಗಳಿಗೂ ನಡುವೆ ಏರ್ಪಟ್ಟಿರುವ ಈ ಅಪಾಯಕಾರಿ ಆದರೆ ಅತ್ಯಂತ ಆಪ್ತ ಮೈತ್ರಿಯಿಂದಾಗಿ ತಮ್ಮ ತಮ್ಮ ದೇಶಗಳ ಉದಾರವಾದಿ ಸಂವಿಧಾನಗಳನ್ನು ಮತ್ತು ಸಂಸ್ಥೆಗಳನ್ನು ನಾಟಕೀಯವಾಗಿ ಕಿತ್ತುಹಾಕುವ ಅಗತ್ಯವೇ ಇಲ್ಲದೆ ಎಷ್ಟು ಸುಲಭವಾಗಿ ಆಯಾ ದೇಶಗಳ ಫ಼್ಯಾಶಿಸ್ಟ್ ಶಕ್ತಿಗಳು ತಮ್ಮ ಪ್ರಯೋಜನಗಳಿಗೆ ಪೂರಕವಾಗಿ ಒಗ್ಗಿಸಿಕೊಳ್ಳುತ್ತಿದ್ದಾರೆಂಬುದ ಕ್ಕೆ ಮೋದಿ ಸರ್ಕಾರವೇ ಸಂವಿಧಾನದ ಭಜನೆ ಮಾಡುತ್ತಿರುವುದು ಒಂದು ಉದಾಹರಣೆ.
ಇದರ ಅರ್ಥ ಈ ದೇಶದ ಪ್ರಜಾತಂತ್ರಕ್ಕೆ ಇನ್ನೂ ಫ಼್ಯಾಶೀ ವಿರೋಧಿ ಸಾಮರ್ಥ್ಯವಿದೆಯೆಂದಲ್ಲ. ಬದಲಿಗೆ ಸಮಕಾಲೀನ ಫ಼್ಯಾಶಿಸಂ ರೂಪದಲ್ಲಿ ಮಾತ್ರ ಪ್ರಜಾತಂತ್ರವನ್ನು ಉಳಿಸಿಕೊಂಡು ಸಾರದಲ್ಲಿ ಫ಼್ಯಾಸೀಕರಿಸುವುದರಲ್ಲಿ ಯಶಸ್ವಿಯಾಗಿದೆ ಎಂದರ್ಥ. ಹಾಗೂ ಆ ಕೈಂಕರ್ಯಕ್ಕೆ ಎಲ್ಲಾ ಪ್ರಜಾತಾಂತ್ರಿಕ ಪಕ್ಷಗಳೂ ಕೈಗೂಡಿಸುತ್ತಾ ಬಂದಿವೆ ಎಂದರ್ಥ. ಆಗಾಗ ಅವುಗಳ ನಡುವೆ ಉಂಟಾಗುವ ಚುನಾವಣಾ ವೈಷಮ್ಯವನ್ನು ಫ಼್ಯಾಶಿಸ್ಟ್ ವಿರೋಧಿ ವೈರುಧ್ಯವೆಂದು ಭಾವಿಸುವುದು ಹಾಗೂ ಅದರಿಂದಾಗಿ ಭಾರತವಿನ್ನೂ ಫ಼್ಯಾಶಿಸ್ಟ್ ಆಗಿಲ್ಲವೆಂದು ವ್ಯಾಖ್ಯಾನಿಸುವುದು ಮತ್ತು ಅವುಗಳನ್ನು ನೆಚ್ಚಿಕೊಳ್ಳುವ ರಾಜಕೀಯ ಕಾರ್ಯತಂತ್ರ ರೂಪಿಸುವುದು ರಾಜಕೀಯ ಪ್ರಮಾದವಾಗುತ್ತದೆ.
ಹೀಗಾಗಿ ಬ್ರಾಹ್ಮಣಶಾಹಿ ಹಿಂದೂತ್ವ ಮತ್ತು ಕಾರ್ಪೊರೇಟ್ ಬಂಡವಾಳವಾದ ಭಾರತೀಯ ಫ಼್ಯಾಶಿಸಂನ ಸಿದ್ಧಾಂತ ಮತ್ತು ಮಾರ್ಗದರ್ಶಿ. ಭಾರತದ ಆಳುವವರ್ಗಗಳ ಯಾವುದೇ ರಾಜಕೀಯ ಪಕ್ಷವೂ ಎಷ್ಟೇ ಬಿಜೆಪಿ ವಿರೋಧಿಯಾಗಿದ್ದರೂ ಬ್ರಾಹ್ಮಣಶಾಹಿ ವಿರೋಧಿ ಅಥವಾ ಬಂಡವಾಳಶಾಹಿ ವಿರೋಧಿಯಲ್ಲ. ಇತಿಹಾಸದಲ್ಲೂ ಕೂಡ ಉದಾರವಾದಿ ಪ್ರಜಾತಂತ್ರವಾದಿಗಳೂ ಸಹ ಬಿಕ್ಕಟ್ಟಿನಲ್ಲಿದ್ದಾಗ ಫ಼್ಯಾಸಿಸಂ ಸ್ನೇಹಿತರೇ ಆಗಿಬಿಟ್ಟಿದ್ದವು. ಆದ್ದರಿಂದ ಭಾರತದ ಫ಼್ಯಾಶಿಸಂ ವಿರೋಧಿ ಹೋರಾಟ ಅತ್ಯಂತ ಪ್ರತಿಗಾಮಿ ಬ್ರಾಹ್ಮಣವಾದಿ ಬಂಡವಾಳಶಾಹಿ ವಿರೋಧಿ ಹೋರಾಟವೇ ಆಗಬೇಕಿರುತ್ತದೆ. ಅರ್ಥಾತ್ ಭಾರತದ ಆಳುವವರ್ಗಗಳಲ್ಲಿ ಫ಼್ಯಾಶಿಸಂ ವಿರೋಧಿ ಬಂಡವಾಳಶಾಹಿ ವರ್ಗವನ್ನು ಮತ್ತು ಪಕ್ಷವನ್ನು ಕಾಣುವುದು ರಾಜಕೀಯ ಕುರುಡಾಗುತ್ತದೆ.
ಆದ್ದರಿಂದಲೇ ಭಾರತೀಯ ಪ್ರಜಾತಂತ್ರ ಮತ್ತು ರಾಜಕೀಯ ವ್ಯವಸ್ಥೆಯು 1991 ರಿಂದಲೇ ಫ಼್ಯಾಶಿಸ್ಟ್ ವಿರೋಧಿಯಾಗುವ ಸಾಮರ್ಥ್ಯವನ್ನು ಒಳಗಿನಿಂದಲೇ ಕಳೆದುಕೊಳ್ಳೂತ್ತಾ ಬಂದಿದ್ದು ಮೋದಿ ಯುಗದಲ್ಲಿ ಅತ್ಯಂತ ಫ಼್ಯಾಶಿಸ್ತ್ ಆಗಿ ಪರಿವರ್ತನೆಯಾಗಿದೆ. ಫ಼್ಯಾಶಿಸಂ ಸರ್ವಾಧಿಕಾರ ಜಾರಿಯಾಗಲು ಪಾಶ್ಚಿಮಾತ್ಯ ದೇಶಗಳಲ್ಲಿ ಬೇಹುಗಾರಿಕೆ, ಕೊಲ್ಲು ಪಡೆ ಇತ್ಯಾದಿ ಡೀಪ್ ಸ್ಟೇಟ್ ಮತ್ತು ಸಂವಿಧಾನ ಬಾಹಿರ ಸಶಸ್ತ್ರ ಪಡೆಗಳಿದ್ದರೆ ಭಾರತದಲ್ಲಿ ಡೀಪ್ ಸ್ಟೇಟ್ ಜೊತೆಗೆ ಸಂಘಪರಿವಾರದ ರೂಪದಲ್ಲಿ ಡೀಪ್ ಫ಼್ಯಾಶಿಸ್ಟ್ ಸೊಸೈಟಿಯೂ ಇದೆ. ಹೀಗಾಗಿ ಭಾರತೀಯ ಫ಼್ಯಾಶಿಸಂ ಯೂರೋಪಿನ ಫ಼್ಯಾಶಿಸಂಗೆ ಹೋಲಿಸಿಕೊಂಡರೆ ಇನ್ನು ಸುಸ್ಥಿರವಾದದ್ದು. ಹೀಗಾಗಿ ಅದನ್ನು ಸೋಲಿಸಲು ಸುಸ್ಥಿರ ಮತ್ತು ಸುದೀರ್ಘ ಫ಼್ಯಾಶಿಸ್ಟ್ ವಿರೋಧಿ ಸಮಾಜವಾದಿ ಜನಸಂಗ್ರಾಮವೇ ಆಗಬೇಕು. ಅದರ ನಾಯಕತ್ವವನ್ನು ಹಿಂದೂ ಬ್ರಾಹ್ಮಣ ಶಾಹಿ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ಶಕ್ತಿಗಳಿಂದ ಬಾಧಿತರಾದ ದಲಿತ-ದಮನಿತ-ಶೋಷಿತ ಜನರೇ ವಹಿಸಬೇಕು.
- ಶಿವಸುಂದರ್
ಜನಪರ ಚಿಂತಕರು ಲೇಖಕರು
Leave a reply