ಮುಸ್ಲಿಮರ ಮೀಸಲಾತಿ, EWS ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ
“ಭೂತದ ಬಾಯಲ್ಲಿ ಭಗವದ್ಗೀತೆ” ಎಂಬ ವಿರೋಧಾಭಾಸದಂತೆ ಸಂಘಿಗಳು ಕೂಡ ಇತ್ತೀಚಿಗೆ ಸಂವಿಧಾನ ಪಠಣ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಘಿಗಳ ಗುರುಪೀಠವಾದ RSS ನ ಅಖಿಲ ಭಾರತ ಪ್ರತಿನಿಧಿ ಸಭೆಯು ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿಯು ಧರ್ಮಾಧಾರಿತವಾದ ಮೀಸಲಾತಿಯಾಗಿದ್ದು ಸಂವಿಧಾನ ಬಾಹಿರವೆಂದು ತೀರ್ಮಾನ ಮಾಡಿದೆ. ಇದರ ಜೊತೆಗೆ ಮುಸ್ಲಿಂ ಮೀಸಲಾತಿಯ ಬಗ್ಗೆ ಟಿವಿ ಕಾರ್ಯಕ್ರಮ ಒಂದರಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ವಲ್ಪ ಉಡಾಫ಼ೆಯಿಂದ ಕೊಟ್ಟ ಉತ್ತರವನ್ನು ತಪ್ಪು ವ್ಯಾಖ್ಯಾನ ಮಾಡುತ್ತಾ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ಸು ಸಂವಿಧಾನವನ್ನು ಬದಲಿಸಲು ಹೊರಟಿದೆ ಎಂದು ದುರುದ್ದೇಶದ ಹುಯಿಲು ಎಬ್ಬಿಸಿದೆ.
ಸಂಘಪರಿವಾರ ಮತ್ತದರ ಬಿಜೆಪಿ ಸರ್ಕಾರಗಳು ಮುಸ್ಲಿಮರ ಅಸ್ಥಿತ್ವ ಹಾಗೂ ಅಸ್ಮಿತೆಯನ್ನೇ ನಾಶ ಮಾಡಲು ಹಲವಾರು ಅಮಾನವೀಯ ಹಾಗೂ ಬರ್ಬರ ರಾಜಕೀಯ ಮತ್ತು ಸಾಮಾಜಿಕ ದಾಳಿಗಳನ್ನು ನಡೆಸುತ್ತಿವೆ. ಅವೆಲ್ಲವೂ ಸಂವಿಧಾನ ವಿರೋಧಿ ಕೃತ್ಯಗಳೆ ಆಗಿವೆ. ಆದರೆ ಅದೇ ಸಂಘಿಗಳ ಕುಲೋತ್ತಮರು ಇದೀಗ ಅದೇ ಸಂವಿಧಾನವನ್ನು ತಮ್ಮ ಕೋಮುವಾದಿ ಅಜೆಂಡಾಗಳಿಗೆ ಪೂರಕವಾಗಿ ವ್ಯಾಖ್ಯಾನಿಸುತ್ತಿರುವುದು ಒಂದು ಭಯಾನಕ ಆದರೆ ಅಸಂಗತ ನಾಟಕದ ಅಂಕದಂತೆ ಕಂಡರೂ ಇವು ಸಂವಿಧಾನವನ್ನು ಒಳಗಿನಿಂದಲೇ ಕೇಸರೀಕರಿಸುವ ಸಂಘಿಗಳ ಮತ್ತೊಂದು ಅಜೆಂಡಾ ಎನ್ನುವುದಕ್ಕೆ ಹೊಸ ಸಾಕ್ಷಿಗಳೇನು ಬೇಕಿಲ್ಲ.
ಮುಸ್ಲಿಂ ಮೀಸಲಾತಿ ಮತ್ತು ಸಂವಿಧಾನದ ಆರ್ಟಿಕಲ್ 15 (4)ಮತ್ತು16 (4)
ಇಂದು ಕರ್ನಾಟಕ ಸರ್ಕಾರವನ್ನೂ ಒಳಗೊಂಡಂತೆ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ ಹಾಗೂ ಇನ್ನಿತರ ಹಲವಾರು ರಾಜ್ಯಗಳಲ್ಲಿ ಮುಸ್ಲಿಮರಿಗೆ ಕೊಡುತ್ತಿರುವ ಮೀಸಲಾತಿ ಹಾಗೂ ಕೇಂದ್ರ ಸರ್ಕಾರವೂ ತನ್ನ ಉದ್ಯೋಗಗಳಲ್ಲಿ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಬಹುಪಾಲು ಮುಸ್ಲಿಂ ಸಮುದಾಯವನ್ನು ಒಳಗೊಳ್ಳುವ ಮೀಸಲಾತಿಯನ್ನು ಕೊಡುತ್ತಿರುವುದು ಧರ್ಮಾಧಾರಿತವೂ ಅಲ್ಲ. ಸಂವಿಧಾನ ಬಾಹಿರವೂ ಅಲ್ಲ. ಅದು ಅತ್ಯಂತ ಸಂವಿಧಾನ ಬದ್ಧ.
ಏಕೆಂದರೆ ಸಂವಿಧಾನದ ಆರ್ಟಿಕಲ್ 15 (4) ಮತ್ತು 16 (4)ರ ಪ್ರಕಾರ ಪ್ರಭುತ್ವವು ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಗಳನ್ನು ವೈಜ್ನಾನಿಕವಾಗಿ ಪತ್ತೆ ಹಚ್ಚಿ ಅವರ ಏಳಿಗೆಗೆ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸರ್ಕಾರಗಳು ಸಮಾಜದಲ್ಲಿ ಈ ಬಗೆಯ ಹಿಂದುಳಿದಿರುವಿಕೆಗೆ ಬಲಿಯಾಗಿರುವ ಯಾವುದೇ ವರ್ಗಗಳು, ಅವರು ಯಾವುದೇ ಧರ್ಮ, ಸಮುದಾಯ, ಜಾತಿ, ಗಳಿಗೆ ಸೇರಿದ್ದರೂ, ಪತ್ತೆ ಹಚ್ಚಿ ಅವರ ಸಾಮಾಜಿಕ ಉನ್ನತಿಗಾಗಿ ಮೀಸಲಾತಿಯನೂ ಒಳಗೊಂಡಂತೆ ವಿಶೇಷ ಅವಕಾಶಗಳನ್ನು ಕಲ್ಪಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಯಾವುದೇ ಸರ್ಕಾರ ಈ ಕಾರಣಗಳಿಗಾಗಿ ಮುಸ್ಲೀಮರಿಗೆ ಮೀಸಲಾತಿಯನ್ನು ಕಲ್ಪಿಸಲೇ ಬೇಕು. ಅದಕ್ಕೆ ಧರ್ಮ ದ ಅಡ್ಡಗೋಡೆಯಿಲ್ಲ.
ಮುಸ್ಲಿಮರು ಹಿಂದುಳಿದ ವರ್ಗಗಳ ಭಾಗ- ಸಾಂವಿಧಾನಿಕ ಕೋರ್ಟುಗಳ ಅದೇಶ
ಮೊದಲನೆಯದಾಗಿ ಮುಸ್ಲಿಮರನ್ನು ಇಡೀ ಸಮುದಾಯವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಕೂಡ ಈಗಲೂ Other Backward Classes-ಇತರ ಹಿಂದುಳಿದ ವರ್ಗಗಳ ಭಾಗವಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲೂ ಈಗ 20 ರಾಜ್ಯಗಳ ವಿವಿಧ ಮುಸ್ಲಿಂ ಸಮುದಾಯಗಳು ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ. 2013 ರಲ್ಲಿ ಕರ್ನಾಟಕದ ಬಿಜೆಪಿಯ ಸದಾನಂದ ಗೌಡ ಸರ್ಕಾರವು ಮುಸ್ಲಿಮರ ಒಂಭತ್ತು ಉಪ ಪಂಗಡಗಳನ್ನು ಬಿಟ್ಟು ಉಳಿದೆಲ್ಲಾ ಮುಸ್ಲಿಮರನ್ನು ಕೇಂದ್ರದ ಒಬಿಸಿ ಮೀಸಲಾತಿ ಒದಗಿಸುವಾಗ ಹಿಂದುಳಿದ ವರ್ಗಗಳೆಂದೇ ಪರಿಗಣಿಸಬೇಕೆಂದು ಆದೇಶಿಸಿತ್ತು. ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಸ್ಪೃಶ್ಯತೆ ಮತ್ತು ಐತಿಹಾಸಿಕ ಅಗಮ್ಯತೆಯನ್ನು ಆಧರಿಸಿ ಎಸ್ಸಿ ಮತ್ತು ಎಸ್ಟಿ ಮೀಸಲಾತಿಗಳನ್ನು ಕಲ್ಪಿಸುವುದರ ಜೊತೆಗೆ ಆರ್ತಿಕಲ್ 15 (4)ಮತ್ತು 16 (4)ರ ಪ್ರಕಾರ ಇತರ ಹಿಂದುಳಿದ ವರ್ಗಗಳನ್ನು ಗುರುತಿಸಿ ವಿಶೇಷ ಅಭಿವೃದ್ಧಿ ಅವಕಾಶಗಳನ್ನು ಕಲ್ಪಿಸುವುದನ್ನೂ ಸಂವಿಧಾನ ಕಡ್ಡಾಯ ಮಾಡುತ್ತದೆ. ಇಲ್ಲಿ ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವುದಕ್ಕೆ ಧರ್ಮಾಧಾರಿತ ನಿಶೇಧವೇನೂ ಇಲ್ಲ.
ಕರ್ನಾಟಕದಲ್ಲಿ 1920 ರ ಮಿಲ್ಲರ್ ಕಮಿಷನ್, ಸ್ವಾತಂತ್ರ್ಯ ನಂತರದಲ್ಲಿ ನಾಗನಗೌಡ ಸಮಿತಿ, ಬಹುಪಾಲು ಮುಸ್ಲಿಮರನ್ನು ಈ ಕಾರಣಗಳಿಗಾಗಿಯೇ ಹಿಂದುಳಿದ ವರ್ಗಗಾಳ ಭಾಗವಾಗಿ ಪರಿಗಣಿಸಿತ್ತು. 1974 ರ ಹಾವನೂರ್ ಕಮಿಷನ್ನು ಮುಸ್ಲಿಮರನ್ನು ಸಾಪೇಕ್ಷವಾಗಿ ಹಿಂದುಳಿದ ಸಮುದಾಯವೆಂದು ಕಂಡುಕೊಂಡರೂ ಹಿಂದುಳಿದ ಜಾತಿಗಳ ಭಾಗವಾಗಿ ವರ್ಗೀಕರಿಸದಾಗ, ದೇವರಾಜ್ ಅರಸ್ ಸರ್ಕಾರ ಮುಸ್ಲಿಮರನ್ನೂ ಕೂಡ ಹಿಂದುಳಿದ ವರ್ಗವಾಗಿ ಪರಿಗಣಿಸಿ ಮೀಸಲಾತಿ ಆದೇಶವನ್ನು ನೀಡುತ್ತದೆ. ಅದನ್ನು ಕರ್ನಾಟಕ ಹೈಕೋರ್ಟಿನಲ್ಲಿ ಪ್ರಶ್ನಿಸಿದಾಗ ಕರ್ನಾಟಕದ ಹೈಕೋರ್ಟಿನ ವಿಭಾಗೀಯ ಪೀಠ 1979 ರ ಏಪ್ರಿಲ್ 9 ರಂದು WP 4371/77 ಪ್ರಕರಣದಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ತೀರ್ಪಿತ್ತಿದೆ:
“..ಮುಸ್ಲಿಮರ ಕುರಿತಾಗಿ ಹೇಳಬೇಕೆಂದರೆ ಮುಸ್ಲಿಮರು ಧಾರ್ಮಿಕ ಅಲ್ಪ ಸಂಖ್ಯಾತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಹಿಂದುಳಿದ ವರ್ಗಗಳಿಂದ ಅಯೋಗವು ಹೊರಗಿಟ್ಟಿದ್ದು ಸಮಂಜಸವಾದ ಕ್ರಮವಲ್ಲ. ಅದೇನೇ ಇದ್ದರೊ ಅಯೋಗವು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರ್ಕಾರಿ ಸೇವೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎಂಬುದನ್ನು ಗುರುತಿಸಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ. ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಕಾರಣವೇ ಅಲ್ಲ. ಆದ್ದರಿಂದ ಸರ್ಕಾರವು ಮುಸ್ಲಿಮರನ್ನು ಮತ್ತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಸರಿಯಾದುದನ್ನೇ ಮಾಡಿದೆ ಎಂದು ನಾವು ಪರಿಗಣಿಸುತ್ತೇವೆ”
ಹಾಗೆಯೇ 1992 ರಲ್ಲಿ ಮಂಡಲ್ ವರದಿಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಒಂಭತ್ತು ನ್ಯಾಯಾಧೀಶರ ಪೀಠವು ಇಂದ್ರಾ ಸಾಹನಿ ಪ್ರಕರಣದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿಸ್ಸಂಧಿಗ್ಧವಾಗಿ ಹೀಗೆ ಸ್ಪಷ್ಟಪಡಿಸಿದೆ: “..ಸರ್ಕಾರೀ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೋ ಒಂದು ಜನವರ್ಗಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ. ಅವರು ಹಿಂದುಗಳೊಳಗಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು ಅಥವಾ ಅದೆ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಮ್, ಸಿಖ್ ಅಥವಾ ಕ್ರಿಸ್ಚಿಯನ್ ಸಮುದಾಯಗಳಿಗೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ”(https://indiankanoon.org/doc/1363234/)
ಹೀಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ ಅವರಿಗೆ ಒಬಿಸಿ ಮೀಸಲಾತಿ ನೀಡಬೇಕಾದ್ದು ಸರ್ಕಾರದ ಸಾಂವಿಧಾನಿಕ ಕರ್ತವ್ಯ. ಅದನ್ನು ಧರ್ಮದ ಆಧಾರದಲ್ಲಿ ನಿರಾಕರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ. ಕರ್ನಾಟಕದಲ್ಲಿ 1986 ರ ವೆಂಕಟಸ್ವಾಮಿ ಅಯೋಗದ ವರದಿ ಮತು 1990 ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ಮೂರನೇ ಹಿಂದುಳಿದ ಅಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ನಾನಿಕ ಅಧ್ಯಯನ ಹಾಗೂ ದತ್ತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ.
1990 ರಲ್ಲಿ ಕೂಲಂಕಶ ಸಾಮಾಜಿಕ ಅಧ್ಯಯನದ ನಂತರ ವರದಿ ನೀಡಿದ ನ್ಯಾ. ಚಿನ್ನಪ್ಪರೆಡ್ಡಿ ಅಯೋಗವು ಹೀಗೆ ಅಭಿಪ್ರಾಯ ಪಡುತ್ತದೆ: “ಒಟ್ಟಾರೆ ಈ ಅಧ್ಯಯನವು ಮುಸ್ಲಿಮರು ಒಂದು ಸಮುದಾಯವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದ್ದಾರೆ ಎಂಬ ಚಿತ್ರಣವನ್ನು ನೀಡುತ್ತದೆ” (p 170, Volume 1)
ಒಬಿಸಿ ಮೀಸಲಾತಿಗೆ ಕೆನೆ ಪದರ ನೀತಿ ಅನ್ವಯವಾಗುವುದರಿಂದ ಮುಸ್ಲಿಮರನ್ನೂ ಒಳಗೊಂಡಂತೆ ಆಯಾ ಸಮುದಾಯಗಳಲ್ಲಿರುವ ಬಲಾಢ್ಯರಿಗೆ ಈ ಮೀಸಲಾತಿ ಸೌಲಭ್ಯ ಕಾನೂನು ಪ್ರಕಾರ ಸಿಗುವುದಿಲ್ಲ. ಹಾಗೆ ನೋಡಿದರೆ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರವೂ ಕೂಡ 2023 ರಲ್ಲಿ ಚುನಾವಣೆಗೆ ಮುಂಚೆ ಜಾರಿ ಮಾಡಿ, ಸುಪ್ರೀಂ ಕೋರ್ಟಿನಲ್ಲಿ ಚೀಮಾರಿ ಹಾಕಿಸಿಕೊಂಡ ನಂತರ ಹಿಂತೆಗೆದುಕೊಂಡ ಹೊಸ ಮೀಸಲಾತಿ ಸೂತ್ರದಲ್ಲೂ ಬೇರೆಬೇರೆ ಪ್ರವರ್ಗದಡಿ ಕ್ರಿಸ್ಚಿಯನ್ನರಿಗೂ, ದಿಗಂಬರ ಜೈನರಿಗೂ, ಬೌದ್ಧರಿಗೂ ಮೀಸಲಾತಿಯನ್ನೂ ಮುಂದುವರೆಸಿತ್ತು. ಆದರೆ ಅದೇ ಮಾನದಂಡವನ್ನು ಮುಸ್ಲಿಮರಿಗೆ ಅನ್ವಯಿಸದೆ ಕೋಮುವಾದಿ ದುರುದ್ದೇಶವನ್ನು ಬಯಲು ಮಾಡಿಕೊಂಡಿತ್ತು.
ಹೀಗಾಗಿ ಯಾವುದೇ ಧರ್ಮ ಅಥವಾ ಜಾತಿ ಅಥವಾ ಇತರ ಪಂಗಡಗಳಿಗೆ ಸೇರಿದ ಗುಂಪೊಂದು ಆಯಾ ರಾಜ್ಯಗಳಲ್ಲಿ ಮುಂದುವರೆದ ಗುಂಪುಗಳಿಗಿಂತ ಸಾಪೇಕ್ಷವಾಗಿ ಶೈಕ್ಷ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆಯೆಂದು ಕಂಡುಬಂದರೆ ಅವುಗಳನ್ನು ಇಡಿಯಾಗಿ ಸಾಮಾಜಿಕ ಹಿಂದುಳಿದ ವರ್ಗವೆಂದೇ ಪರಿಗಣಿಸಿ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಉಪಾಧಿಗಳನ್ನು ಕಲ್ಪಿಸಿಕೊಡುವುದೇ ಸಂವಿಧಾನ ಬದ್ಧ ಸರ್ಕಾರದ ಕರ್ತವ್ಯ. ಅದನ್ನು ಮಾಡದಿರುವುದೇ ಸಂವಿಧಾನ ಬಾಹಿರ. ಆದ್ದರಿಂದ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲಾಗುತ್ತಿದೆ ಎಂಬ RSS ಗಳ ವಾದವೇ ಸಂವಿಧಾನ ವಿರೋಧಿಯಾದದ್ದು.
ಆರೆಸ್ಸೆಸ್ಸಿಗರೇ EWS ಮೀಸಲಾತಿಯನ್ನೇಕೆ ವಿರೋಧಿಸಲಿಲ್ಲ?
ಹಾಗೆ ನೋಡಿದರೆ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ತದ್ವಿರುದ್ಧವಾದದ್ದು ಮೇಲ್ಜಾತಿ ಮಧ್ಯಮ ವರ್ಗಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಕೊಟ್ಟಿರುವ EWS ಮೀಸಲಾತಿ. ಸಂವಿಧಾನದ 15 (4) ಮತ್ತು 16 (4)ರ ಪ್ರಕಾರ ಸಂವಿಧಾನದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಮೀಸಲಾತಿಯನ್ನು ಕಲ್ಪಿಸುವ ಅವಕಾಶ ಮಾತ್ರವೇ ಇದೆ. ಮೀಸಲಾತಿಯನ್ನು ಕಲ್ಪಿಸಲು ಆರ್ಥಿಕ ಹಿಂದುಳಿದಿರುವಿಕೆಯನ್ನು ಏಕಮಾತ್ರ ಮಾನದಂಡವಾಗಿ ಪರಿಗಣಿಸಲಾಗದೆಂದು ಒಂಭತ್ತು ನ್ಯಾಯಾಧೀಶರು 1992 ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸರ್ವ ಸಮ್ಮತಿಯಿಂದ ಕೊಟ್ಟ ತೀರ್ಪಿನಲ್ಲಿ ಸ್ಪಷ್ಟ ಪಡಿಸಲಾಗಿದೆ. ಆರ್ಥಿಕ ಹಿಂದುಳಿದಿರುವಿಕೆಯ ಜೊತೆಗೆ ಸಾಮಾಜಿಕ-ಶೈಕ್ಷಣಿಕ ಹಿಂದುಳಿದಿರುವಿಕೆ ಇದ್ದಾಗ ಮಾತ್ರ ಸಾಮಾಜಿಕ ನ್ಯಾಯದ ಭಾಗವಾಗಿ ಸಾಂವಿಧಾನಿಕವಾಗಿ ಮೀಸಲಾತಿಗೆ ಅರ್ಹರಾಗುತ್ತಾರೆ.
ಆದರೆ 2019 ರಲ್ಲಿ ನರೇಂದ್ರ ಮೋದಿಯವರ ಸಂಘಿ ಸರ್ಕಾರ ಆರ್ಥಿಕ ಹಿಂದುಳಿದಿರುವಿಕೆಯನ್ನು ಏಕಮಾತ್ರ ಮಾನದಂಡವನ್ನಾಗಿ ಮಾಡಿಕೊಂಡು ಎಸ್ಸಿ-ಎಸ್ಟಿ-ಒಬಿಸಿ ಮೀಸಲಾತಿ ಪಡೆಯದ ಅಂದರೆ ಮೇಲ್ಜಾತಿಗಳಿಗೆ ಸೀಮಿತವಾಗಿ ಮಾತ್ರ EWS ಮೀಸಲಾತಿಯನ್ನು ಜಾರಿ ಮಾಡಿತು. ಈ ಮೀಸಲಾತಿಯನ್ನು ಜಾರಿ ಮಾಡಲು ತನಗೆ ಆರ್ಟಿಕಲ್ 46 ಅವಕಾಶ ಮಾಡಿಕೊಡುತ್ತದೆಂದು ವಾದಿಸಿತು. ಆದರೆ ಸಂವಿಧಾನದ ಆರ್ಟಿಕಲ್ 46 ಹೀಗೆ ಹೇಳುತ್ತದೆ: “The State shall promote with special care the educational and economic interests of the weaker sections of the people, and, in particular, of the Scheduled Castes and the Scheduled Tribes, and shall protect them from social injustice and all forms of exploitation.”
ಹೀಗೆ ಆರ್ಟಿಕಲ್ 46 ಸ್ಪಷ್ಟಪಡಿಸುವಂತೆ ಸಮಾಜದ ದುರ್ಬಲ ವರ್ಗಗಳು ಎಂದರೆ ಆರ್ಥಿಕವಾಗಿ ಮಾತ್ರ ದುರ್ಬಲವಾಗಿರುವ ಎಂದು ಈ ಅರ್ಟಿಕಲ್ ಹೇಳುವುದಿಲ್ಲ. ಬದಲಾಗಿ ಈ ವಿಶೇಷ ರಕ್ಷಣೆಯನ್ನು ಸಾಮಾಜಿಕ ಅನ್ಯಾಯ ಹಾಗೂ ಇತರ ಎಲ್ಲಾ ಬಗೆಯ ಶೋಷಣೆಗಾಳಿಂದ ರಕ್ಷಿಸಲು ನೀಡಲಾಗುವುದೆಂದು ಹೇಳುತ್ತದೆ. ಈ ದೇಶದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳು ಸಾಮಾಜಿಕ ಅನ್ಯಾಯ ಮತ್ತು ಇತರ ಶೋಷಣೆಗಳಿಗೆ ಗುರಿಯಾಗುತ್ತಿದ್ದಾರೆಯೇ ವಿನಾ ಆ ಗುಂಪುಗಳಿಗೆ ಸೇರದ ಶೋಷಕ ಜಾತಿಗಳಲ್ಲ.
ಅಷ್ಟು ಮಾತ್ರವಲ್ಲ ಆ ಮೀಸಲಾತಿಗೆ ವಾರ್ಷಿಕ 8 ಲಕ್ಷ ಅರ್ಥಾತ್ ಮಾಸಿಕ 65000 ರೂ. ಆದಾಯ ಇರುವರನ್ನು ಆರ್ಥಿಕವಾಗಿ ದುರ್ಬಲ ವರ್ಗವೆಂದು ಮೋದಿ ಸರ್ಕಾರ ಘೋಷಿಸಿದೆ. ಅರ್ಥಾತ್ EWS ಮೀಸಲಾತಿ ಯು ಮೇಲ್ಜಾತಿಗಳ ಮಧ್ಯಮವರ್ಗಕ್ಕೆ ಕೊಟ್ಟ ಮೀಸಲಾತಿಯೇ ಆಗಿದೆ. ಏಕೆಂದರೆ ಆರ್ಥಿಕವಾಗಿ ದುರ್ಬಲ ವರ್ಗಗಳೆಂಬ ಮಾನದಂಡವನ್ನು ಅನುಸರಿಸಿದರೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವವರು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರೇ ಆಗಿರುತ್ತಾರೆ. ಅವರಿಗೆ EWS ಮೀಸಲಾತಿ ಸಲ್ಲುವುದಿಲ್ಲ. RSS ಗಳು ಸಂವಿಧಾನಪರರು ಮತ್ತು ಶೋಷಿತರ ಪರರೂ ಆಗಿದ್ದರೆ ಮೋದಿ ಸರ್ಕಾರ ಜಾರಿಗೆ ತಂದ ಈ ಸಂವಿಧಾನ ವಿರೋಧಿ EWS ಮೀಸಲಾತಿಯನ್ನು ಏಕೆ ವಿರೋಧಿಸಲಿಲ್ಲ? ಮುಸ್ಲೀಮ್ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ತರುವುದಾಗಿ ಡಿಕೆ ಶಿವಕುಮಾರ್ ಹೇಳಿದರೋ ಇಲ್ಲವೋ. ಮೋದಿ ಸರ್ಕಾರ ಮಾತ್ರ ಮೇಲ್ಜಾತಿ ಮಧ್ಯಮ ವರ್ಗದವರಿಗೆ ಮೀಸಲಾತಿ ನೀಡಲು ಸಂವಿಧಾನಕ್ಕೆ 103 ನೇ ತಿದ್ದುಪಡಿಯನ್ನು ತಂದಿದ್ದಂತೂ ನಿಜ.
ಸಂವಿಧಾನಪರರಾದ ಆರೆಸ್ಸಿಗರೇ ಇದನ್ನು ಏಕೆ ನೀವು ಬೀದಿಬೀದಿಯಲ್ಲಿ ವಿರೋಧಿಸಲಿಲ್ಲ?
ಸುಪ್ರೀಂ ಕೋರ್ಟು EWS ಮೀಸಲಾತಿಯನ್ನು 3-2 ಬಹುಮತದಲ್ಲಿ ಎತ್ತಿಹಿಡಿಯಿತು. ಕಾಂಗ್ರೆಸ್ಸೂ ಒಳಗೊಂಡಂತೆ, ಬಿಎಸ್ಪಿ, ಎಡಪಕ್ಷಗಳೆಲ್ಲವೂ ಈ ಸಂವಿಧಾನ ಬಾಹಿರ EWS ಮೀಸಲಾತಿಯ ಬೆಂಬಲಕ್ಕೆ ನಿಂತರು. ಇವರೆಲ್ಲರಗಿಂತ ದೇಶಭಕ್ತರಾದ RSS ಗಳೇ ನೀವೇಕೆ ಇವರನ್ನು ಮತ್ತು ಬಿಜೆಪಿಯನ್ನು ವಿರೋಧಿಸಲಿಲ್ಲ? RSS ಗಳೇ ಹಿಂದೂ ರಾಷ್ಟ್ರವೇ ಸಂವಿಧಾನ ಬಾಹಿರವಲ್ಲವೇ? ಮುಸ್ಲಿಂ ಮೀಸಲಾತಿಯನ್ನು ಸಂವಿಧಾನ ಬಾಹಿರವೆಂದ ಸಭೆಯಲ್ಲೇ ಆರೆಸ್ಸಸ ನಾಯಕರು
ಭಾರತವನ್ನು ಆದಷ್ಟು ಬೇಗ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಅಂತಿಮ ಯೋಜನೆಗಳನ್ನು ರೂಪಿಸಿದ್ದಾರೆ. ಅರೆಸ್ಸೆಸ್ಸಿಗರೇ ಹಿಂದೂ ರಾಷ್ಟ್ರ ವೆಂಬ ಕಲ್ಪನೆಯೇ ಭಾರತದ ಸಂವಿಧಾನಕ್ಕೆ ವಿರುದ್ಧವಲ್ಲವೇ?
ಭಾರತದ ಸಂವಿಧಾನದ ಮುನ್ನುಡಿಗೆ ಸೆಕ್ಯುಲಾರ್ ಎಂಬ ಪದ ಜೋಡಣೆಯಾಗಿದ್ದು 1977 ರಲ್ಲಾದರೂ 1950 ರ ಜನವರಿ 26 ರಂದೇ ಭಾರತ ಸಂವಿಧಾನವು ಭಾರತದ ಪ್ರಭುತ್ವವು ಯಾವೊಂದು ಧರ್ಮದ ಪ್ರಭುತ್ವವಲ್ಲವೆಂದು ಘೋಷಿಸಿತ್ತು. ಆ ಕಾರಣಕ್ಕಾಗಿಯೇ 1950 ರಲ್ಲಿ ಜಾರಿಯಾದ ಸಂವಿಧಾನದಲ್ಲಿ ಸೆಕ್ಯುಲಾರಿಸಂ ನ ಸಾರವಾದ ಆರ್ಟಿಕಲ್ 14,15,16, 25,26, 27, 29, 30 ಗಳನ್ನೂ ಮೂಲಭೂತ ಹಕ್ಕುಗಳಾಗಿ ಸೆಕ್ಯುಲಾರ್ ರಾಷ್ಟ್ರವೆಂದು ಘೋಷಿಸಿತು.
ಅದಕ್ಕಾಗಿಯೇ ಆರ್ಟಿಕಲ್ 25,26,27 ಗಳು ಈ ದೇಶದ ಪ್ರಜೆಗಳು ತಮ್ಮ ತಮ್ಮ ಧರ್ಮವನ್ನು ಪಾಲಿಸಲು, ಮತ್ತು ಪ್ರಚಾರ ಮಾಡಲು ಅವಕಾಶ ಮಾಡಿಕೊಡುತ್ತದೆ. ಸಂವಿಧಾನದ 14,15,16 , ಕಲಮುಗಳು ಭಾರತದ ಪ್ರಭುತ್ವವು ಧರ್ಮದ ಆಧಾರದ ಮೇಲೆ ಭಾರತದ ನಾಗರಿಕರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲವೆಂದು ಘೋಶಿಸುತ್ತದೆ. ಹಾಗೂ ಈ ದೇಶದ ಬಾಷಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ವಿಶೇಷ ಸಂಸ್ಥೆಗಳನ್ನು ಮಾಡಿಕೊಳ್ಳಲು ಅರ್ತಿಕಲ್ 29 ಮತ್ತು 30 ರಲ್ಲಿ ವಿಶೇಷ ರಕ್ಷಣೆ ಕೊಡುತ್ತದೆ. ಹೀಗಾಗಿ ಸಂಘಿಗಳ ಹಿಂದೂ ರಾಷ್ಟ್ರ ಪರಿಕಲ್ಪನೆಯೇ ಸಂವಿಧಾನ ಬಾಹಿರ. ಅದನ್ನು ಜಾರಿಗೊಳಿಸುವುದೆ ತಮ್ಮ ಧ್ಯೇಯವೆಂದು ಘೋಷಿಸುವ RSS-BJP ಇನ್ನಿತರ ಸಂಘಟನೆಗಳ ಅಸ್ಥಿತ್ವವೇ ಸಂವಿಧಾನ ಬಾಹಿರವಲ್ಲವೇ?
ಧರ್ಮಾಧಾರಿತ ಮೀಸಲಾತಿ ಅಧರ್ಮವೇ?
ಧರ್ಮಾಧಾರಿತ ಮೀಸಲಾತಿಯು ಈ ಸದ್ಯಕ್ಕೆ ಸಂವಿಧಾನದ ಪ್ರಕಾರ ಮಾನ್ಯವಲ್ಲ ಅನ್ನುವುದು ಸರಿ. ಆದರೆ ಸಮಾಜದ ಒಂದು ವರ್ಗ ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಗುರಿಯಾಗುತ್ತಿದ್ದರೆ ಮತ್ತು ಅವಕಾಶ ವಂಚಿತರಾಗಿದ್ದರೆ ಧರ್ಮಾ ಆಧಾರಿತವಾಗಿಯೇ ಮೀಸಲಾತಿ ಕೊಡಬಾರದೇಕೆ ಎಂಬ ಚಿಂತನೆಯು ಸಂವಿಧಾನ ಬಾಹಿರವೇನಲ್ಲ. ಏಕೆಂದರೆ ಮೇಲ್ಜಾತಿ ಬಡವರಿಗೆ ನೀಡಿದ ಸುಪ್ರೀಂ ತೀರ್ಪಿಗೆ ವ್ಯತಿರಿಕ್ತವಾಗಿ ಆರ್ಥಿಕ ಮಾನದಂಡವನ್ನೇ ಏಕೈಕ ಮಾನದಂಡವನ್ನಾಗಿ ಬಳಸಿ ಕೊಟ್ಟಿರುವ EWS ಮೀಸಲಾತಿಯೂ ಕೂಡ 2019 ರ ವರೆಗೆ ಸಂವಿಧಾನ ಬಾಹಿರವಾಗಿತ್ತು. ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಆ ಮೀಸಲಾತಿಯನ್ನು ನೀಡಿರುವಾಗ ಅಗತ್ಯವಿದ್ದಲ್ಲಿ ಮತ್ತು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದ್ದಲ್ಲೆ ಧರ್ಮಾಧಾರಿತ ಮೀಸಲಾತಿಯ ಬಗ್ಗೆ ಚಿಂತನೆ ಮಾಡುವುದು ಅತ್ಯಗತ್ಯವಾಗುತ್ತದೆ.
ಹಾಗೆ ನೋಡಿದರೆ ಮುಸ್ಲಿಮರ ಸ್ಥಿತಿಗತಿಗಳ ಬಗ್ಗೆ ಕೂಲಂಕಶ ಅಧ್ಯಯನ ಮಾಡಿರುವ ಸಾಚಾರ್ ಸಮಿತಿ, ರಂಗನಥ ಮಿಶ್ರ ವರದಿಗಳೆಲ್ಲವೂ ಮುಸ್ಲಿಮರು ಅವರು ಅನುಸರಿಸುತ್ತಿರುವ ಧರ್ಮದ ಕಾರಣಕ್ಕಾಗಿಯೇ ಸಮಾಜದಲ್ಲಿ ಹೆಚ್ಚಿನ ತಾರತಮ್ಯಕ್ಕೆ ಮತ್ತು ಅವಕಾಶ ವಂಚನೆಗೆ ಗುರಿಯಾಗುತ್ತಿದ್ದಾರೆಂದು ಅಂಕಿಅಂಶಗಳ ಸಮೇತ ಸಾಬೀತು ಪಡಿಸುತ್ತದೆ. ಕಳೆದ ಇಪ್ಪತ್ತು ವರ್ಷಗಳಲ್ಲಂತೂ ಸಂಘಪರಿವಾರದ ಕಾರಣದಿಂದ ಮುಸ್ಲಿಮರು, ಕ್ರಿಸ್ಚಿಯನ್ನರು ತಮ್ಮ ಧರ್ಮದ ಗುರುತಿನ ಕಾರಣಕ್ಕೆ ಹೆಚ್ಚೆಚ್ಚು ದಾಳಿ, ತಾರತಮ್ಯ ಮತ್ತು ವಂಚನೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಅವರ ಅಸ್ಮಿತೆ ಮತ್ತು ಅಸ್ಥಿತ್ವದ ರಕ್ಷಣೆಗೆ ಧರ್ಮಾಧಾರಿತ ರಕ್ಷಣ ಮತ್ತು ಸಾಮಾಜಿಕ ನ್ಯಾಯದ ಕ್ರಮಗಳು ಬೇಕಲ್ಲವೇ ಎಂಬ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಬೇಕಿವೆ.
ವಾಸ್ತವದಲ್ಲಿ ಬ್ರಿಟಿಷರ ಕಾಲದಲ್ಲಿ ಈ ದೇಶಕ್ಕೆ ರಾಜಕೀಯ ಮೀಸಲಾತಿ ಸಿಕ್ಕಿದ್ದೇ ಕೋಮು ಆಧಾರಿತವಾಗಿ. ಅಂಬೇಡ್ಕರ್ ಅವರೂ ಸಹ ಅಸೃಷ್ಯರನ್ನು ಮುಸ್ಲಿಮರಂತೆ , ಸಿಖರಂತೆ ಹಿಂದುಗಳಿಂದ ಪ್ರತ್ಯೇಕವಾದ ಅಲ್ಪಸಂಖ್ಯಾರನ್ನಾಗಿಯೇ ಪರಿಗಣಿಸಿ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಅಗ್ರಹಿಸಿದ್ದರು. ಸ್ವಾತಂತ್ರ್ಯಕ್ಕೆ ಮುಂಚೆ 1945 ರಲ್ಲಿ ಪಕ್ಷಾತೀತವಾಗಿ ನೇಮಕವಾಗಿದ್ದ ತೇಜ್ ಬಹದ್ದೂರ್ ಸಪ್ರು ಅವರ ಸಮಿತಿಯು ಕೂಡ ಮುಸ್ಲಿಂ ಲೀಗಿನ ಪಾಕಿಸ್ತಾನ ಪ್ರತಿಪಾದನೆಯನ್ನು ನಿರಾಕರಿಸುತ್ತಾ ಜಂಟಿ ಮತಕ್ಷೇತ್ರಗಳಲ್ಲಿ ಮುಸ್ಲಿಂ ಮೀಸಲಾತಿಯನ್ನು ಒದಗಿಸುವ ಪ್ರಸ್ತಾಪವನ್ನು ಮಾಡಿತ್ತು. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಧರ್ಮಾಧಾರಿತ ಮೀಸಲಾತಿಯು ದೇಶದ ಐಕ್ಯತೆಗೆ ಧಕ್ಕೆ ತರುತ್ತದೆಂದು ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನ ನಿರಾಕರಿಸಿತು. ಆದರೆ ಸಾಮಾಜಿಕವಾಗಿ ಹಿಂದುಳಿದಿದ್ದರೆ ಧರ್ಮದ ಗುಂಪಾಗಿದ್ದರೂ ಮೀಸಲಾತಿಯನ್ನು ಒದಗಿಸುವ ಅವಕಶಗಳನ್ನು ಒದಗಿಸಿತು.
ಆದರೆ ಕಳೆದ ಮೂವತ್ತು ವರ್ಷಾಗಳಾಲ್ಲಿ RSS-BJP ಗಳ ಧರ್ಮಾಧಾರಿತ ಸಂವಿಧಾನ ಬಾಹಿರ ಹಿಂದೂ ರಾಷ್ಟ್ರ ರಾಜಕಾರಣವು ಮುಸ್ಲಿಮರ ಪ್ರಾತಿನಿಧ್ಯ, ಅವಕಾಶ, ಪ್ರಗತಿಗಳೆಲ್ಲದರ ಮೇಲೆ ದಾಳಿ ಮಾಡುತ್ತಿದೆ. ಆದ್ದರಿಂದ ಈ ದೇಶದ ಐಕ್ಯತೆ ಮತ್ತು ಸಮಗ್ರತೆ ಉಳಿಯಬೇಕೆಂದರೆ ಒಂದೋ RSS, BJP ಗಳ ಕೋಮುವಾದಿ ಫ಼್ಯಾಶಿಸ್ಟ್ ರಾಜಕಾರಣವಾದರೂ ನಿಶೇಧವಾಗಬೇಕು ಅಥವಾ ಅದರಿಂದ ಬಾಧಿತರಾದ ಧಾರ್ಮಿಕ ಸಮುದಾಯಗಳಿಗೆ ಧರ್ಮಾಧಾರಿತವಾದ ಪರಿಹಾರವನ್ನಾದರೂ ಒದಗಿಸಬೇಕು ಎಂಬ ಪರಿಸ್ಥಿತಿ ಎದುರಾಗುತ್ತಿರುವುದಂತೂ ನಿಜ. ಅಲ್ಲವೇ?
- ಶಿವಸುಂದರ್
ಜನಪರ ಚಿಂತಕರು ಲೇಖಕರು…
Leave a reply