ಭಾರತದ 50 ನೇ ಮುಖ್ಯ ನ್ಯಾಯಾಧೀಶರಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಇದೇ ನವಂಬರ್ 10 ಕ್ಕೆ ನಿವೃತ್ತರಾಗುತಿದ್ದಾರೆ. ಕಳೆದ ಒಂದು ದಶಕದಲ್ಲಿ ಅತಿ ದೀರ್ಘ ಕಾಲದ – ಎರಡು ವರ್ಷಗಳ ಅವಧಿಗೆ (2024ರ ನವಂಬರ್ ತನಕ ) ಮುಖ್ಯ ನ್ಯಾಯಾಧೀಶರಾಗುವ ಅವಕಾಶ ನ್ಯಾ. ಚಂದ್ರಚೂಡ್ ಅವರಿಗೆ ಒದಗಿ ಬಂದಿತ್ತು. ಅವರ ತಂದೆಯವರೂ (ವೈ. ವಿ. ಚಂದ್ರಚೂಡ್ ) ಸಹ ಅತಿ ದೀರ್ಘ ಕಾಲ (ಏಳು ವರ್ಷ-1978-85 ) ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದರು.
ಭಾರತವು ಒಂದು ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ನ್ಯಾ. ಡಿ.ವೈ . ಚಂದ್ರಚೂಡ್ ಅವರು ಮುಖ್ಯ ನ್ಯಾಯಾಧೀಶರಾಗಿದ್ದು, ಹಾಗೂ ಕಳೆದೊಂದು ದಶಕದಲ್ಲಿ ಈ ಹಿಂದಿನ ಬಹುಪಾಲು ಮುಖ್ಯ ನ್ಯಾಯಮೂರ್ತಿಗಳು ಆಡಳಿತ ರೂಢ ಹಿಂದುತ್ವವಾದಿ ಸರ್ಕಾರದ ಸಿದ್ದಂತ ಮತ್ತು ರಾಜಕೀಯಗಳಿಗೆ, ಅದರ ಸರ್ವಾಧಿಕಾರಿ ಕ್ರಮಗಳಿಗೆ ಕಿಂಚಿತ್ತೂ ನ್ಯಾಯಿಕ/ ಸಾಂವಿಧಾನಿಕ ತಡೆಯೊಡ್ಡದೆ ತಲೆ ಬಾಗಿ, ಆಳುವ ಸರ್ಕಾರ ದೇಶದ ಜನತೆಯ ಹಕ್ಕುಗಳ ಮೇಲೆ ಸತತ ದಾಳಿಯನ್ನು ನಡೆಸುತ್ತಿದ್ದರೂ ರಕ್ಷಿಸದೆ ಇದ್ದ ಸಂದರ್ಭದಲ್ಲಿ, ಭಾರತದ ನ್ಯಾಯಾಂಗವು ನಿಜಕ್ಕೂ ಸ್ವತಂತ್ರವೇ ಅಥವಾ ಕಾರ್ಯಾಂಗದ ಮತ್ತೊಂದು ಸಾಲಂಕೃತ ಕಚೇರಿಯೇ ಎಂಬ ಗಂಭೀರವಾದ ಪ್ರಶ್ನೆ ಉದ್ಭವಿಸಿರುವ ಕಾಲದಲ್ಲಿ ತಮ್ಮ ಅಪಾರ ವಿದ್ವತ್ತು ಹಾಗೂ ನೀಡಿದ್ದ ಕೆಲವು ನ್ಯಾಯಾದೇಶಗಳ ಮೂಲಕ ನ್ಯಾ. ಡಿ.ವೈ. ಚಂದ್ರಚೂಡ್ ಅವರು ದೇಶದಲ್ಲಿ ಸಹಜವಾಗಿಯೇ ನಿರೀಕ್ಷೆಯನ್ನು ಹುಟ್ಟಿಸಿದ್ದರು.
ಉದಾಹರಣೆಗೆ ಪುಟ್ಟಸ್ವಾಮಿ ಪ್ರಕರಣ ದಲ್ಲಿ ಜನರ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದು ವಿಸ್ತರಿಸಿದ ಒಂಭತ್ತು ಜನರ ಪೀಠದಲ್ಲಿ ಚಂದ್ರಚೂಡ್ ಕೂಡ ಒಬ್ಬರಾಗಿದ್ದರು. ಭೀಮ ಕೋರೆಗಾಂವ್ ಪ್ರಕರಣದಲ್ಲಿ ಮಹಾರಾಷ್ಟ್ರ ಪೋಲೀಸರ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಅಲ್ಪಸಂಖ್ಯಾತ ತೀರ್ಪು ಕೊಟ್ಟಿದ್ದರು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿದಿದ್ದರು. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಆರೋಪಿಯ ಜಾಮೀನು ಹಕ್ಕಿನ ಪರವಾಗಿಯೂ ಹಲವಾರು ಮಹತ್ವದ ಆದೇಶಗಳನ್ನು ಕೊಟ್ಟಿದ್ದರು. ಕೇರಳದ ಹಿಂದೂ ತರುಣಿ ಸ್ವ ಇಚ್ಛೆಯಿಂದ ಇಸ್ಲಾಮಿಗೆ ಮತಾಂತರಗೊಂಡು ಮುಸ್ಲಿಂ ಯುವಕನನ್ನು ಮದುವೆಯಾದ ಪ್ರಖ್ಯಾತ ಹಾದಿಯಾ ಪ್ರಕರಣ ದಲ್ಲಿ ವಯಸ್ಕ ತರುಣ ತರುಣಿಯರು ಸಮ್ಮತಿ ಪೂರ್ವಕವಾಗಿ ವೈವಾಹಿಕ ಸಂಬಂಧ ಕ್ಕೆ ಮುಂದಾದಾಗ ಕುಟುಂಬ, ಪ್ರಭುತ್ವ ಮತ್ತು ಸಮಾಜ ಮಧ್ಯಪ್ರವೇಶ ಮಾಡುವ ಹಾಗಿಲ್ಲ ಎಂಬ ಮಹತ್ವದ ತೀರ್ಪು ಕೊಟ್ಟಿದ್ದರು. ಹಾಗೂ ಶಬರಿಮಲೆ ಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸುವುದು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಬರದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ತೀರ್ಪು ಕೊಟ್ಟ ಪೀಠದ ಬಹುಸಂಖ್ಯಾತ ತೀರ್ಪನ್ನು ಬರೆದಿದ್ದರು.
ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತಾಗುವಲ್ಲಿ ಮತ್ತು ಲಾಕ್ದೌನ ಅವಧಿ ಇದ್ದಿದ್ದರಲ್ಲಿ ಸಹನೀಯವಾಗುವಂತೆ ಮಾಡುವಲ್ಲಿ ನ್ಯಾ. ಚಂದ್ರಚೂಡ್ ಅವರ ಪೀಠ ಮಧ್ಯ ಪ್ರವೇಶ ಮಾಡಿದ್ದೆ ಕಾರಣವಾಗಿತ್ತು… ಆದರೆ ಅವರು ಎರಡು ವರ್ಷಗಳ ಅವಧಿಯನ್ನು ಮುಗಿಸಿ ನಿವೃತ್ತರಾಗುತ್ತಿರುವ ಈ ಹೊತ್ತಿನಲ್ಲಿ ನ್ಯಾ. ಚಂದ್ರಚೂಡರ ಲೀಗಸಿ-ಪರಂಪರೆಯು ಈ ಹಿಂದೆ ಆಳುವ ಮೋದಿ ಸರ್ಕಾರಕ್ಕೆ ತಲೆಬಾಗಿದ ಇತರ ಮುಖ್ಯ ನ್ಯಾಯಧೀಶರುಗಳಿಗಿಂತ ಯಾವರೀತಿಯಿಂದಲೂ ಭಿನ್ನವಿರಲಿಲ್ಲ ಮಾತ್ರವಲ್ಲ, ಇನ್ನು ಹೆಚ್ಚು ಹಾನಿಕಾರಿಯಾಗಿತ್ತು ಎಂಬುದನ್ನು ಭಾರತ ಅತ್ಯಂತ ವಿಷಾದದಿಂದ ಗುರುತಿಸುತ್ತಿದೆ.
ಪ್ರಾಯಶಃ ಸಮಕಾಲೀನ ನ್ಯಾಯಾಂಗ ಇತಿಹಾಸದಲ್ಲಿ ಪ್ರಧಾನಿ ಮೋದಿಯವರನ್ನು ಬಿಟ್ಟರೆ ಅತ್ಯಂತ ಹೆಚ್ಚು ಸಾರ್ವಜನಿಕ ಚರ್ಚೆಯಲ್ಲಿ ಇದ್ದದ್ದು ಚಂದ್ರಚೂಡರು. ಆದರೆ ಸೆಮಿನಾರುಗಳಲ್ಲಿ ಭರ್ಜರಿಯಾಗಿ ಸಂವಿಧಾನದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ನ್ಯಾ. ಚಂದ್ರಚೂಡರು , ನ್ಯಾಯಾಲಯದ ಒಳಗೆ ಮಾತ್ರ ಸಂವಿಧಾನ ಮತ್ತು ಜನರ ಹಕ್ಕುಗಳನ್ನು ಔಟು ಮಾಡುತ್ತಿದ್ದೇಕೆ ಎಂಬ ಪ್ರಶ್ನೆ ಅವರ ಕಾಲಾವಧಿಯನ್ನು ವಿಶ್ಲೇಷಣೆ ಮಾಡುವ ಪ್ರತಿಯೊಬ್ಬರಲ್ಲೂ ಮೂಡುತ್ತಿದೆ.
ನ್ಯಾ. ಚಂದ್ರಚೂಡರ ಅವಧಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಆರು ವರ್ಗೀಕರಣ ಮಾಡಿಕೊಂಡರೆ ಸುಲಭವಾಗುತ್ತದೆ: 1.ತಮ್ಮೆಲ್ಲಾ ಮೇಧಾಶಕ್ತಿಯನ್ನು ಬಳಸಿ ಖುಲ್ಲಂ ಖುಲ್ಲಾ ಮೋದಿ ಸರ್ಕಾರದ ಸಿದ್ಧಾಂತದ ಪರವಾಗಿ ಸಂವಿಧಾನದ ವ್ಯಾಖ್ಯಾನ ಮಾಡಿ ಸಂವಿಧಾನ ವಿರೋಧಿ ಕಾರ್ಪೊರೇಟ್ ಬಂಡವಾಳಶಾಹಿ ಪರ ಹಿಂದೂ ರಾಷ್ರ್ವವಾದದ ರಾಜಕಾರಣಕ್ಕೆ ನ್ಯಾಯಿಕ ಸಮರ್ಥನೆ ನೀಡಿದ್ದು. 2.ಕಾನೂನಿನ ವ್ಯಕ್ತಿನಿಷ್ತ ವ್ಯಾಖ್ಯಾನ ಮಾಡಿ ಮೋದಿ ಸರ್ಕಾರದ ನಾಯಕರುಗಳ ಪರವಾದ ಆದೇಶಗಳು. 3.ಪಾಕ್ಷಿಕವಾಗಿ ಮೋದಿ ಸರ್ಕಾರದ ವಿರುದದ ಸ್ವರೂಪವಿದ್ದರೂ ಸಾರದಲ್ಲಿ ಮೋದಿ ಸರ್ಕಾರಕ್ಕೆ ಯಾವುದೇ ಹಾನಿಯುಂಟು ಮಾಡದ ಆದೇಶಗಳು. 4.ನಾಗರಿಕ ಹಕ್ಕುಗಳನ್ನು ಅರೆಬರೆಯಾಗಿ ಎತ್ತಿಹಿಡಿದು, ಸಾರದಲ್ಲಿ ಭಿನ್ನಮತವನ್ನು ಹತ್ತಿಕ್ಕುವ ಮೋದಿ ಸರ್ಕಾರದ ನೀತಿಗಳು ಮುಂದುವರೆಯಲು ಅವಕಾಶ ಕೊಟ್ಟಿರುವುದು. 5.ಇವಲ್ಲದೆ ಮೋದಿ ಸರ್ಕಾರದ ಸರ್ವಾಧಿಕಾರವನ್ನು ಪ್ರಶ್ನಿಸುವಂತ ಪ್ರಕರಣಗಳನ್ನೇ ಕೈಗೆತ್ತಿಕೊಳ್ಳದಿರುವುದು. 6.ನ್ಯಾಯಾಲಯದ ಹೊರಗಡೆ ಕೊನೆಯ ದಿನಗಳಲ್ಲಿ ಸಂಪೂರ್ಣವಾಗಿ ಸರ್ಕಾರದೊಡನೆ ಮತ್ತು ಅದರ ಸಿದ್ಧಾಂತದೊಡನೆ ಸಹಮತ ವ್ಯಕ್ತಪಡಿಸುವ ವರ್ತನೆಗಳನ್ನು ತೋರುತ್ತಿರುವುದು.
ಹಿಂದೂತ್ವ ತಾತ್ವಿಕತೆಯ ಪರವಾದ ನ್ಯಾಯಿಕ ತೀರ್ಮಾನಗಳು:
ಅ) ಬಾಬ್ರಿ ಮಸೀದಿ -ರಾಮಜನ್ಮಭೂಮಿ, ಗ್ಯಾನ್ ವ್ಯಾಪಿ ಪ್ರಕರಣಗಳು
ಬಿಜೆಪಿಯ ದ್ವೇಷ ರಾಜಕಾರಣದ ಹುಸಿ ಬುನಾದಿಯಾದ ಬಾಬ್ರಿ ಮಸೀದಿ ಕೆಡವಿ ರಾಮಮಂದಿರ ಕಟ್ಟುವ ಅಜೆಂಡಾಗೆ ನ್ಯಾ. ಚಂದ್ರಚೂಡರು ತಮ್ಮೆಲ್ಲಾ ಬುದ್ಧಿಮತ್ತೆಯನ್ನು ಬಳಸಿ ಸಾಂವಿಧಾನಿಕ ಸಮರ್ಥನೆಯನ್ನು ಒದಗಿಸಿದವರಲ್ಲಿ ಪ್ರಮುಖರು. 2019 ರಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ರಾಮ ಮಂದಿರ ನಿರ್ಮಾಣದ ಪರವಾಗಿ ಅತ್ಯಂತ ಅನ್ಯಾಯಯುತ ಮತ್ತು ಸರ್ವಸಮ್ಮತ ತೀರ್ಪು ನೀಡಿತು. ಆ ಮೂಲಕ ಮೋದಿಯ ಹಿಂದುತ್ವ ರಥಯಾತ್ರೆಗೆ ಉನ್ನತ ನ್ಯಾಯಪೀಠ ಇದ್ದ ಅಡ್ಡಿಯನ್ನು ಕೂಡ ನಿವಾರಿಸಿತ್ತು. ಅಲ್ಲದೆ ನ್ಯಾಯಾದೇಶದಲ್ಲಿ ಸಾಕ್ಷಿ-ಪುರಾವೆಗಳಿಗಿಂತ ಬಹುಸಂಖ್ಯಾತರ ನಂಬಿಕೆಯೇ ಹೆಚ್ಚು ಮಹತ್ವದ್ದು ಎಂಬ ವ್ಯಾಖ್ಯಾನ ಈ ದೇಶದ ಸೆಕ್ಯುಲಾರ್ ಬುನಾದಿಗೆ ಬಲವಾದ ಪೆಟ್ಟುಕೊಟ್ಟಿದೆ. ಈ ನ್ಯಾಯಾದೇಶವನ್ನು ತಾನೇ ಬರೆದದ್ದೆಂದೂ, ಅದನ್ನು ಸಂವಿಧಾನದ ಮಾರ್ಗದರ್ಶನಕ್ಕಿಂತ ಹೆಚ್ಚಾಗಿ ದೇವರ ಮಾರ್ಗದರ್ಶನದಲ್ಲಿ ಬರೆದನೆಂದು ಮೊನ್ನೆ ನ್ಯಾ. ಚಂದ್ರಚೂಡರೇ ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಒಬ್ಬ ಮುಖ್ಯ ನ್ಯಾಯಾಧೀಶನಾಗಿ ಹಾಗೆ ಮಾಡುವುದರಲ್ಲಿ ತಪ್ಪೇನು ಇಲ್ಲವೆಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲೂ ಸಮರ್ಥಿಸಿಕೊಂಡಿದ್ದಾರೆ.
ಅಷ್ಟು ಮಾತ್ರವಲ್ಲ. ಭಾರತದ ಎಲ್ಲಾ ಮಸೀದಿಗಳನ್ನು ಕೆಡವಿ ಮಂದಿರ ಕಟ್ಟಬೇಕೆಂಬ ಹಿಂದೂತ್ವವಾದಿ ಯೋಜನೆಗೂ ಸಾಕ್ಷಾತ್ ಚಂದ್ರಚೂಡರೇ ಗ್ಯಾನ್ ವ್ಯಾಪಿ ಮಸೀದಿ ಪ್ರಕರಣದಲ್ಲಿ ಲೈಸೆನ್ಸ್ ಕೊಟ್ಟಿದ್ದಾರೆ. ವಾಸ್ತವದಲ್ಲಿ ಅಯೋಧ್ಯಾ ತೀರ್ಪಿನಲ್ಲಿ ನ್ಯಾ. ಚಂದ್ರಚೂಡ್ ಅವರನ್ನೂ ಒಳಗೊಂಡಂತೆ ಐವರೂ ನ್ಯಾಯಾಧೀಶರು ಸಹ ತಮ್ಮ ಆದೇಶದಲ್ಲಿ ದೇಶದ ಉಪಾಸನಾ ಸ್ಥಳ ಗಳ ಧಾರ್ಮಿಕ ಸ್ವರೂಪವನ್ನು 1947 ಕ್ಕಿಂತ ಮುಂಚೆ ಹೇಗಿತ್ತೋ ಹಾಗೆ ಉಳಿಸಿಕೊಳ್ಳಬೇಕೆಂದು ತಾಕೀತು ಮಾಡುವ Places Of Worship Act-1991ಅನ್ನು ಈ ದೇಶದ ಸೆಕ್ಯುಲಾರಿಸಂ ರಕ್ಷಕ ಎಂದೆಲ್ಲಾ ಹೇಳಿದ್ದರು. ಅಯೋಧ್ಯೆ ಒಂದನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕಡೆ ಎಲ್ಲಾ ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವ ಹಾಗಿಲ್ಲ ಎಂದು ಆ ಆದೇಶದಲ್ಲಿ ಉಲ್ಲೇಖಿಸಿದ್ದರು.
ಆದರೆ ಅಂಥಾ ಆದೇಶ ಕೊಟ್ಟ ಪೀಠದ ಹಿರಿಯ ನ್ಯಾಯಾಧೀಶರಾಗಿದ್ದ ನ್ಯಾ. ಚಂದ್ರಚೂಡ್ ಅವರೇ ಗ್ಯಾನ್ ವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಇತ್ತೋ ಇಲ್ಲವೋ ಎಂದು ಅರಿತುಕೊಳ್ಳಲು 1991 ರ ಕಾಯಿದೆಅಡ್ಡಿ ಮಾಡುವುದಿಲ್ಲ ಎಂದು ಆದೇಶ ಕೊಟ್ಟರು. ಗ್ಯಾನ್ ವ್ಯಾಪಿ ಆದೇಶ ಮತ್ತು ಅಯೋಧ್ಯಾ ಪ್ರಕರಣದಲ್ಲಿ ಜನರ ನಂಬಿಕೆಯೇ ಸಾಕ್ಷಿ ಪುರಾವೆಗಳಿಗಿಂತ ಹೆಚ್ಚಿನ ಮಹತ್ವದ್ದು ಎಂದು ಕೊಟ್ಟಿರುವ ಆದೇಶಗಳನ್ನು ಈಗ ಕಾಶಿ, ಮಥುರಾ ನಮ್ಮ ಬಾಬಾಬುಡನ್ ದರ್ಗಾ ಎಲ್ಲಾ ಕಡೆ ಮಸೀದಿ ನಾಶಕ್ಕೆ ಅವಕಾಶ ಕೊಡುವ ಮೇಲ್ಪಂಕ್ತಿ ಆದೇಶವನ್ನಾಗಿ ಕೆಳಗಿನ ಕೋರ್ಟುಗಳು ಬಳಸುತ್ತಿವೆ. ಹಾಗೂ ಅದು ಹಿಂದುತ್ವ ಫ್ಯಾಶಿಸ್ಟ್ ರಾಜಕೀಯವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೋಷಿಸುತ್ತಿದೆ.
ಆ) ಆರ್ಟಿಕಲ್ 370 ರದ್ದು- ಫ಼ೆಡರಲ್ ವಿರೋಧಿ-ಬಿಜೆಪಿಯ ದುರಾಕ್ರಮಣಕ್ಕೆ ನ್ಯಾಯಂಗದ ಸೀಲು:
ಬಿಜೆಪಿಯ ಹಿಂದೂತ್ವ ಅಜೆಂಡಾದ ಮತ್ತೊಂದು ಪ್ರಮುಖ ಕಾರ್ಯಸೂಚಿ ಆರ್ಟಿಕಲ್ 370 ರದ್ದು. ಅದನ್ನು 2019 ರ ಆಗಸ್ಟ್ 5 ರಂದು ಮೋದಿ ಸರ್ಕಾರ ಒಂದು ರಾಷ್ಟ್ರಪತಿ ಆದೇಶದ ಮೂಲಕ ಅತ್ಯಂತ ಅಸಂವಿಧಾನಿಕವಾಗಿ ಮಾಡಿಬಿಟ್ಟಿತು. ಹಾಗೂ ಕಾಶ್ಮೀರವನ್ನು ವಿಭಜೀಕರಿಸಿ ರಾಜ್ಯದ ಸ್ಥಾನಮಾನವನ್ನು ಕಸಿದುಕೊಂಡಿತು. ಇದರ ವಿರುದ್ಧದ ಅಹವಾಲನ್ನು ಪರಿಶೀಲಿಸುವ ಪೀಠದ ಮುಖ್ಯಸ್ಥರಾಗಿದ್ದ ಮುಖ್ಯ ನ್ಯಾಯಾಧೀಶ ಚಂದ್ರಚೂಡರು ಎಲ್ಲಾ ಸಾಂವಿಧಾನಿಕ ನಿಯಮಗಳನ್ನು, ತತ್ವಗಳನ್ನು , ರೀತಿ ನಿಯಮಗಳನ್ನು ಒಗ್ಗಿಸಿ, ಬಗ್ಗಿಸಿ ಬಿಜೆಪಿ ಸರ್ಕಾರದ ಆದೇಶಕ್ಕೆ ನ್ಯಾಯಿಕ ಮುದ್ರೆಯನ್ನು ಒತ್ತಿಬಿಟ್ಟರು. ಅದೇರೀತಿ ದೆಹಲಿಯ ಚುನಾಯಿತ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಮೋದಿ ಸರ್ಕಾರ ಅತ್ಯಂತ ಸರ್ವಾಧಿಕಾರದಿಂದ ಕಿತ್ತುಹಾಕಿದ ಫ಼ೆಡರಲ್ ವಿರೋಧಿ ಕ್ರಮವನ್ನೂ ಕೂಡ ಚಂದ್ರಚೂಡ ಪೀಠ ಮಾನ್ಯ ಮಾಡಿತು.
ಕಾರ್ಪೊರೇಟ್ ಬಂಡವಾಳಶಾಹಿ ತಾತ್ವಿಕತೆಯ ಪರ ತೀರ್ಮಾನಗಳು
ಅ) ಪ್ರಭುತ್ವ ನಿರ್ದೇಶನಾ ತತ್ವಗ ಳನ್ನು, ಬಂಡವಾಳಶಾಹಿ ನಿರ್ದೇಶನ ತತ್ವಗಳನ್ನಾಗಿಸಿದ ನ್ಯಾ. ಚಂದ್ರಚೂಡ್
ಸಂವಿಧಾನದ ಕಲ್ಯಾಣ ರಾಜ್ಯ ಪರಿಕಲ್ಪನೆಯ ಬಗ್ಗೆ ಅಂಬೇಡ್ಕರ್ ಅವರ ಪ್ರಭುತ್ವ ಸಮಾಜವಾದಿ ಆಶಯದ ಬಗ್ಗೆ ಸೆಮಿನಾರುಗಳಲ್ಲಿ ಉದ್ದುದ್ದ ಮಾತನಾಡುತ್ತಿದ್ದ ನ್ಯಾ. ಚಂದ್ರಚೂಡ್ ಅವರ ನಿವೃತ್ತರಾಗುವ ಮುಂಚೆ ನಿನ್ನೆ (4-11-2024) ಒಂಭತ್ತು ನ್ಯಾಯಾಧೀಶರ ಪೀಠದ ಭಾಗವಾಗಿ ಕೊಟ್ಟ ಬಹುಸಂಖ್ಯಾತರ ಆದೇಶದಲ್ಲಿ ಸಂವಿಧಾನದ ಈ ಆಶಯವನ್ನೇ ಮಾರುಕಟ್ಟೆಯ ಕಾರ್ಪೊರೇಟ್ ಪರ ಹಿತಾಸಕ್ತಿಗಳ ಪರವಾಗಿ ವ್ಯಾಖ್ಯಾನ ಮಾಡಿದ್ದಾರೆ. ಹಾಗೂ ಭಾರತ ಕಂಡ ಅತ್ಯಂತ ಪ್ರಾಮಾಣಿಕ ಹಾಗೂ ಜನಪರ ನ್ಯಾಯಾಧೀಶ ನ್ಯಾ. ಕೃಷ್ಣ ಅಯ್ಯರ್ ಅವರು ದೇಶದ ಸಂಪತ್ತಿನ ಮೇಲೆ ಸಮುದಾಯದ ಒಡೆತನವಿರಬೇಕು ಎಂದು ಸಂವಿಧಾನದ ಆರ್ಟಿಕಲ್ 39 (ಬಿ) ಬಗ್ಗೆ ಕೊಟ್ಟ ವ್ಯಾಖ್ಯಾನವನ್ನು ಕಮ್ಯುನಿಸ್ಟ್ ಸಿದ್ಧಂತವಾದಿ ಆಶಯವೆಂದು ಪರೋಕ್ಷವಾಗಿ ಟೀಕಿಸಿ ತಿರಸ್ಕರಿಸಿದ್ದಾರೆ.
ಮತ್ತು ಬದಲಾಗುತ್ತಿರುವ ಬಂಡವಾಳಶಾಹಿ ಜಗತ್ತಿನ ಮೌಲ್ಯಕ್ಕೆ ತಕ್ಕಂತೆ ಸಂವಿಧಾನದ ಪ್ರಭುತ್ವ ನಿರ್ದೇಶನಾ ತತ್ವಗಳನ್ನು ಬಂಡವಾಳಶಾಹಿ ನಿರ್ದೇಶನಾ ತತ್ವಗಳನ್ನಾಗಿ ಮಾನ್ಯ ಮಾಡಿದ್ದಾರೆ. ಇದು ಬರಲಿರುವ ದಿನಗಳಲ್ಲಿ ಸಮುದಾಯದ ಸಂಪತ್ತಿನ ಮೇಲೆ ಕಾರ್ಪೊರೇಟ್ ದಾಳಿಯನ್ನು ಅತ್ಯಂತ ಸರಾಗಗೊಳಿಸಿದೆ.
ಹಲವಾರು NCLAT ಪ್ರಕರಣಗಳಲ್ಲಿ ನ್ಯಾ. ಚಂದ್ರಚೂಡರು ಕಾರ್ಪೊರ್ಟುಗಳಿಗೆ ಕೊಟ್ಟಷ್ಟು ವಿನಾಯತಿಯನ್ನು ಬೇರೆ ಯಾವ ನ್ಯಾಯಧೀಶರು ಕೊಟ್ಟಿಲ್ಲ. ಫ಼ಿನೊಲೆಕ್ಸ್ ಎಂಬ ಬೃಹತ್ ಕಾರ್ಪೊರೇಟ್ ಕಂಪನಿಯ ಪ್ರಕರಣದಲಂತೂ NCLT ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನೂ ಕೂಡ ನ್ಯಾಯಾಲಯಕ್ಕೆ ಕರೆಸಿ ಸುಪ್ರೀಂ ಆದೇಶ ಜಾರಿ ಮಾಡದಿರುವುದಕ್ಕಾಗಿ ನ್ಯಾಯಾಲಯ ನಿಂದನೆ ಮೊಕದ್ದಮೆಯನ್ನು ಹೂಡುವ ಬೆದರಿಕೆಯನ್ನೂ ಹಾಕಿದ್ದವರೂ ಕೂಡ ಇದೇ ನ್ಯಾ. ಚಂದ್ರಚೂಡರೇ.
PMLA ಪ್ರಕರಣಗಳಲ್ಲಿ ಬಂಧಿತರಾದ ಹೋರಾಟಗಾರರ ಜಾಮೀನು ವಿಷಯದ ಬಗ್ಗೆ ನಿರ್ಲಕ್ಷ್ಯ ತೋರುವ ನ್ಯಾ. ಚಂದ್ರಚೂಡರ ನ್ಯಾಯಾಲಯ ಈ ಕಾನೂನಿನ ಕೆಳಗೆ ಬಂಧಿತರಾದ ಉದ್ಯಮಿಗಳನ್ನು ಬಿಡುಗಡೆ ಮಾಡಲು ಮಾತ್ರ ಇನ್ನಿಲ್ಲದ ಮುತುವರ್ಜಿ ವಹಿಸಿದೆ.
ನ್ಯಾಯಪರವೆಂದು ತೋರುತ್ತಲೇ ಬಿಜೆಪಿಯನ್ನು ರಕ್ಷಿಸಿದ, ಪೋಷಿಸಿದ ಆದೇಶಗಳು
ನ್ಯಾ. ಚಂದ್ರಚೂಡ ಅವರು ಮುಖ್ಯ ನ್ಯಾಯಾಧೀಶರಾಗುವ ಮುನ್ನ ನ್ಯಾಯಪೀಠಗಳ ಸಹಭಾಗಿ ನ್ಯಾಯಾಧೀಶರಾಗಿದ್ದ ಕಾಲದಿಂದಲೂ ಬಿಜೆಪಿ ಸರ್ಕಾರದ ಮತ್ತು ಪಕ್ಷದ ಮುಖ್ಯಸ್ಥರು ಮತ್ತು ಕಾರ್ಪೊರೇಟ್ ಬೆಂಬಲಿಗರ ಆಸಕ್ತಿಗೆ ಭಂಗ ಬರುವ , ಇರುಸು ಮುರುಸು ಉಂಟು ಮಾಡುವ ಯಾವ ಆದೇಶವನ್ನು ಅವರು ನೀಡದಿರುವುದು ಸ್ಪಷ್ಟವಾಗುತ್ತದೆ.
ಅ) ನ್ಯಾ. ಲೋಯಾ ಹತ್ಯೆ ಪ್ರಕರಣ:
ಉದಾಹರಣೆಗೆ ಮೋದಿ ಸರ್ಕಾರಕ್ಕೆ ಮತ್ತು ಗೃಹಮಂತ್ರಿ ಅಮಿತ್ ಷಾ ಅವರ ರಾಜಕೀಯ ಜೀವನಕ್ಕೆ ಮುಳುವಾಗಿ ಪರಿಣಮಿಸಿದ ಜಸ್ಟಿಸ್ ಲೋಯಾ ಹತ್ಯೆ/ ಸಾವು ಪ್ರಕರಣದಲ್ಲಿ ಆರೆಸ್ಸೆಸ್ ಮತ್ತು ಗೃಹಮಂತ್ರಿ ಷಾ ಅವರ ಹಸ್ತಕ್ಷೇಪ ಇರುವ ಬಗ್ಗೆ ಹೊಸದಾಗಿ ತನಿಖೆ ನಡೆಸಲು ಕೋರಿ ಪ್ರಶಾಂತ್ ಭೂಷಣ ಹಾಗೂ ಇನ್ನಿತರ ಹೆಸರಾಂತ ವಕೀಲರು ಸಾಕಷು ಪುರಾವೆ ಮತ್ತು ಸಾಕ್ಷಿಗಳನ್ನು ಕೊಟ್ಟು ಮರು ವಿಚಾರಣೆ ಕೇಳಿದರೂ ನ್ಯಾ. ಚಂದ್ರಚೂಡ್ ಪೀಠ ಅದನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು.. ಪರಿಣಾಮವಾಗಿ ಮೋದಿ-ಷಾ ಸರ್ಕಾರ ಅತ್ಯಂತ ದೊಡ್ಡ ಆಪತ್ತಿನಿಂದ ಬಚಾವಾಯಿತು.
ಅ) ಕೊಲೆಜಿಯಂ ನಿರ್ಧಾರಗಳ ಮುಖಭಂಗ
ಮತ್ತೊಂದು ಪ್ರಕರಣದಲ್ಲಿ ಸುಪ್ರೀಂನ ಹಿರಿಯ ನ್ಯಾಯಾಧೀಶ ನ್ಯಾ. ಕೌಲ್ ಅವರ ಪೀಠ ಕೊಲೆಜಿಯಂ ಶಿಫ಼ಾರಸ್ಸು ಮಾಡಿದ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಮೊದಿ ಸರ್ಕಾರ ಮಾಡುತ್ತಿರುವ ವಿಳಂಬದ ಬಗ್ಗೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಮೋದಿ ಸರ್ಕಾರ ಮುಜುಗರಕ್ಕೆ ಒಳಗಾಗಿರುವ ಹೊತ್ತಿನಲ್ಲಿ ಮುಖ್ಯ ನ್ಯಾಯಾಧೀಶರಾಗಿ Master Of The Roster ಆಗಿರುವುದರಿಂದ ಪ್ರಕರಣಗಳನ್ನು ವಹಿಸುವ ಆಡಳಿತಾತ್ಮಕ ಪರಮಾಧಿಕಾರವನ್ನು ಬಳಸಿಕೊಂಡು ಆ ಪ್ರಕರಣವನ್ನೇ ಕೌಲ್ ಅವರ ಪೀಠದಿಂದ ನ್ಯಾ. ಚಂದ್ರಚೂಡರು ಹಿಂತೆಗೆದುಕೊಂಡುಬಿಟ್ಟಿದ್ದರು.
ಇ)ಎಲೆಕ್ಟೊರಲ್ ಬಾಂಡ್- ಅಪರೇಶನ್ ಸಕ್ಸಸ್, ಪೇಶೆಂಟ್?
ಅದೇರೀತಿ ಎಲೆಕ್ಟೊರಲ್ ಬಾಂಡ್ ಅನ್ನು ರದ್ದು ಮಾಡಿದರೂ, ಇಡೀ ಯೋಜನೆಯ ಹಿಂದೆ ಆಳುವ ಸರ್ಕಾರಗಳು ಬಾಂಡ್ ಹೆಸರಿನಲ್ಲಿ ಲಂಚ ಪಡೆದು ಕಾರ್ಪೊರೇಟುಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಸಾಬೀತಾಗಿದೆ ಎಂದು ಒಪ್ಪಿಕೊಂಡರೂ, ಆ ಅಪರಾಧದ ಅಮೂಲಾಗ್ರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಮಾತ್ರ ನಿರಾಕರಿಸಿ ಬಿಜೆಪಿ ಸರ್ಕಾರವನ್ನು ಬಚಾವು ಮಾಡಿದ್ದು ಕೂಡ ನ್ಯಾ. ಚಂದ್ರಚೂಡರ ಪೀಠವೇ ..
ಈ)BCCI ಪ್ರಕರಣ-ಮರಿ ಷಾ ಪರ ಪಕ್ಷಪಾತ
ಕ್ರೀಡೆಯ ಹೆಸರಲ್ಲಿ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾಗಿ ಸಾವಿರಾರು ಕೋಟಿಯ ಒಡೆಯನಾಗಿರುವ ಬಿಸಿಸಿಐ ಸಂಸ್ಥೆಯ ಭ್ರಷ್ಟಚಾರ ಮತ್ತು ಸ್ವಜನಪಕ್ಷಪಾತಗಳನ್ನು ನಿಗ್ರಹಿಸಲು ಸುಪ್ರೀಂ ಕೋರ್ಟೇ 2015ರಲ್ಲಿ ನಿವೃತ್ತ ಮುಖ್ಯ ನ್ಯಾಯಾಧೀಶ ಲೋಧಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಅದು ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ತರಲು ಯಾರೂ ಕೂಡ ಸರಣಿಯಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಪದವಿಯಲ್ಲಿರಬಾರದು. ಮೂರನೆ ಬಾರಿ ಸ್ಪರ್ಧಿಸುವ ಮುನ್ನ ಕನಿಷ್ಟ ಮೂರು ವರ್ಷಗಳ ಕಾಲ ಪದವಿಯಿಂದ ದೂರವಿರಬೇಕು ಎಂದು ಸೂತ್ರ ರೂಪಿಸಿತ್ತು.
ಆದರೆ ಗೃಹಮಂತ್ರಿ ಅಮಿತ್ ಶಾ ಮಗ ಕ್ರಿಕೆಟಿನ ಗಂಧಗಾಳಿ ಗೊತ್ತಿಲ್ಲದ ಜಯ್ ಶಾ ಸಂಸ್ಥೆಯ ಮುಖ್ಯಸ್ಥಾನಾಗಿ ಎರಡು ಬಾರಿ ಅವಧಿ ಪೂರೈಸಿದ ನಂತರ ರಾಷ್ಟ್ರೀಯ ಹಿತಾಸಕ್ತಿಯ ಕಾರಣಕ್ಕಾಗಿ ಮೂರನೇ ಅವಧಿಗೂ ಅವರನ್ನೇ ಅಯ್ಕೆ ಮಾಡಲು ಪೂರಕವಾಗಿ ನಿಯಮಗಳಿಗೆ ಬದಲವಣೆ ತರಲು ಬಿಸಿಸಿಐ ಸುಪ್ರೀಂ ಕೋರ್ಟನ್ನು ಕೋರಿತು. ಅದನ್ನು ನ್ಯಾ, ಚಂದ್ರಚೂಡ್ ಪೀಠ ಅನಾಮತ್ತು ಒಪ್ಪಿಕೊಂಡು ಶಾ ಮುಂದುವರೆಯಲು ಅವಕಾಶ ಮಾಡಿಕೊಟ್ಟಿತು.
ಉ) ಹಾದಿಯಾ ಪ್ರಕರಣದಲ್ಲಿ NIA ತನಿಖೆಗೆ ಅವಕಾಶ
LGBTQ ಸಮುದಾಯದ ಸಮ್ಮತ ವಿವಾಹದ ವಿಷಯದಲ್ಲಿ ವಯಸ್ಕರ ನಡುವಿನ ಸಮ್ಮತಿಪೂರ್ವಕ ವಿವಾಹದ ಆಯ್ಕೆಯಲ್ಲಿ ಸಮಾಜವಾಗಲಿ ಸರ್ಕಾರವಾಗಲೀ ಮೂಗು ತೂರಿಸಬಾರದೆಂಬ ಅತ್ಯಂತ ನ್ಯಾಯ ಸಮ್ಮತ ಆದರೆ ಅಲ್ಪಸಂಖ್ಯಾತ ತೀರ್ಪು ನೀಡಿದ್ದ ನ್ಯಾ. ಚಂದ್ರಚೂಡರು ವಯಸ್ಕ ಹಿಂದೂ ಯುವತಿ ಸ್ವ ಇಚ್ಚೆಯಿಂದ ಹಾದಿಯಾ ಆಗಿ ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ವಯಸ್ಕನನ್ನು ಮದುವೆಯಾದ ಪ್ರಕರಣದಲ್ಲಿ ಮಾತ್ರ ಮಾನದಂಡವನ್ನೇ ಬದಲಿಸಿಬಿಟ್ಟರು.
ಹಾದಿಯಾ ಕೇಸಿನಲ್ಲಿ ವಯಸ್ಕರ ಸಮ್ಮತಿಯುಕ್ತ ಮದುವೆಯ ಹಕ್ಕಿನ ಬಗ್ಗೆ ಸಕಾರಾತ್ಮಕ ತೀರ್ಪು ಕೊಟ್ಟರೂ ನ್ಯಾ. ಚಂದ್ರಚೂಡ್ ಪೀಠವೇ , ಈ ಮದುವೆ ಹಿಂದೆ ಲವ್ ಜಿಹಾದ್ ಷದ್ಯಂತ್ರ ಇರಬಹುದೇ ಎಂದು ತನಿಖೆ ಮಾಡಲು NIA ಗೂ ಅವಕಾಶ ಮಾಡಿಕೊಟ್ಟು ಸರ್ಕಾರದ ಬಲಯುತ ಮಧ್ಯಪ್ರವೇಶಕ್ಕೆ ಅವಕಾಶ ಕೊಟ್ಟಿತ್ತು.
ಮೋದಿ ಸರ್ಕಾರಕ್ಕೆ ಮುಜುಗುರ ಉಂಟುಮಾಡುವ ಕೇಸುಗಳನ್ನೇ ಕೈಗೆತ್ತಿಕೊಂಡಿಲ್ಲ
ಇವಲ್ಲದೆ ಮೋದಿ ಸರ್ಕಾರದ ಹಲವು ಸರ್ವಾಧಿಕಾರಿ ಹಾಗೂ ಹಿಂದೂತ್ವವಾದಿ ನೀತಿಗಳು ಸುಪ್ರೀಂನಲ್ಲಿ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿವೆ. ಅವುಗಳ ವಿಚಾರಣೆ ಕೈಗೊಂಡರೆ ಮೋದಿ ಸರ್ಕಾರಕ್ಕೆ ಇರುಸು ಮುರುಸಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ತನ್ನ ನಾಗರೀಕರ ಮೇಲೆಯೇ ಕಾನೂನು ಬಾಹಿರವಾಗಿ ಗೂಢಚರ್ಯೆ ಮಾಡಿ ಸಿಕ್ಕಿಹಾಕಿಕೊಂಡಿರುವ ಪೆಗಾಸಸ ಗೂಢಚರ್ಯೆ ಪ್ರಕರಣ. ಹಾಗೆಯೇ ಭಾರತದ ಸೆಕ್ಯುಲಾರ್ ಬುನಾದಿಯನ್ನೇ ಧಾರ್ಮಿಕವಾಗಿ ಬದಲಾಯಿಸುವ CAA-NPR/NRC ನೀತಿ. ಇವುಗಳ ಜೊತೆಗೆ ಕರ್ನಾಟಕ ಹೈಕೋರ್ಟು ನೀಡಿದ ಹಿಜಾಬ್ ತೀರ್ಪನ್ನು ಸುಪ್ರೀಂನಲ್ಲಿ ದ್ವಿಸದಸ್ಯ ಪೀಠ ತದ್ವಿರುದ್ಧ ನಿಲುವಿನಿಂದಾಗಿ ಬಗೆಹರಿಸಲಾಗಿಲ್ಲ. ಅದರ ಪರಿಹಾರಕ್ಕೆ ತ್ರಿಸದಸ್ಯ ಪೀಠ ನೇಮಕಾತಿಯಾಗಬೇಕಿತ್ತು. ಆದರೆ ಇವ್ಯಾವ ಪ್ರಕರಣಗಳನ್ನು ತನ್ನ ಎರಡು ವರ್ಷಗಳ ಅವಧಿಯಲ್ಲಿ ನ್ಯಾ. ಚಂದ್ರಚೂಡರು ಮುಟ್ಟಲೂ ಹೊಗಲಿಲ್ಲ.
ನ್ಯಾಯಾಲಯದ ಹೊರಗೆ ಬಚ್ಚಿಡಲಾಗದ ಸನಾತನ
ಇನ್ನು ತಮ್ಮ ಅವಧಿಯ ಕೊನೆ ದಿನಗಳಲ್ಲಂತೂ ನ್ಯಾ. ಚಂದ್ರಚೂಡರು ತಾವು ಸಂವಿಧಾನವಾದಿಯಾಗಿರುವುದಕ್ಕಿಂತ ಹೆಚ್ಚಾಗಿ ಸನಾತನವಾದಿ ಎಂಬುದರ ಬಗ್ಗೆ ಯಾವ ಮುಚ್ಚುಮರೆಯನ್ನು ಮಾಡುತ್ತಿಲ್ಲ. ಹಾಗೂ ಆ ಮೂಲಕ ನ್ಯಾಯಮೂರ್ತಿಗಳು ತಮ್ಮ ಖಾಸಗಿ ಬದುಕಿನಲ್ಲೂ ಸಂವಿಧಾನವಾದಿಯಾಗಿ ಕಾಣಿಸಿಕೊಳ್ಳಬೇಕು ಎಂದು 1997 ರಲ್ಲಿ ಸರ್ವ ನ್ಯಾಯಾಧೀಶರು ಜನತೆಗೆ ನೀಡಿದ ಅಧಿಕೃತ ಒಡಂಬಡಿಕೆಯನ್ನೇ ಮುರಿಯುತ್ತಿದ್ದಾರೆ.
ಮೊನ್ನೆ ಅಯೋಧ್ಯ ಪ್ರಕರಣದಲ್ಲಿ ತೀರ್ಪು ಕೊಡಲು ಸಂವಿಧಾನಕ್ಕಿಂತ ದೈವದ ಮೊರೆ ಹೋದೆ ಎಂದು ಯಾವುದೇ ಸಿಗ್ಗಿಲ್ಲದೆ ಕೊಚ್ಚಿಕೊಂಡ ನ್ಯಾ. ಚಂದ್ರಚೂಡರು ಎರಡು ವರ್ಷದ ಕೆಳಗೆ ಗುಜರಾತಿನಲ್ಲಿ ದ್ವಾರಕೆ ಮತ್ತು ಪುರಿಯಲ್ಲಿರುವ ಧರ್ಮ ಧ್ವಜಗಳು ವಿಶೇಷ ಅರ್ಥವನ್ನು ನೀಡುತ್ತವೆ ಎಂದು ಕೂಡ ಸೂಚನೆ ನೀಡಿದ್ದರು.
(https://indianexpress.com/…/after-temple-visits-cji…/)
ಅದೇ ರೀತಿ ಗಣೇಶನ ಹಬ್ಬವನ್ನು ತನ್ನ ಮನೆಯಲ್ಲಿ ಪ್ರಧಾನಿಯ ಜೊತೆ ಸೇರಿ ಆಚರಿಸಿ ಅದರ ಚಿತ್ರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದು ಮಾತ್ರವಲ್ಲದೆ ಮೊನ್ನೆ ಇಂಡಿಯನ್ ಎಕ್ಸ್ಪ್ರೆಸ್ ಸಂದರ್ಶನದಲ್ಲಿ ಅದನ್ನು ತಮ್ಮ ಸ್ಥಾನಕ್ಕೆ ಅನುಚಿತವಾಗಿ ಎಗ್ಗುಸಿಗ್ಗಿಲದೆ ಸಮರ್ಥಿಸಿಕೊಂಡಿದ್ದಾರೆ.
ಇದು ನ್ಯಾ. ಚಂದ್ರಚೂಡರ ಪರಂಪರೆ. ಒಂದು ಬಗೆಯ ವಿನೂತನ ಸನಾತನ ಪರಂಪರೆ.
ಹಿರಿಯ ವಕೀಲ ಪ್ರಶಾಂತ್ ಭೂಶಣ್ ಅವರು ನ್ಯಾ. ಚಂದ್ರಚೂಡರು ಇನ್ನು ಮುಖ್ಯ ನ್ಯಾಯಾಧೀಶರಾಗುವ ಮುಂಚೆ ಬರೆಯುತ್ತಾ ಭಾರತದ ಪ್ರಜಾತಂತ್ರದ ಅವನತಿಯ ಕಾರಣಗಳನ್ನು ದಾಖಲಿಸುವಾಗ ಚರಿತ್ರಕಾರರು ಮಾಡುವ ಪಟ್ಟಿಯಲ್ಲಿ ಭಾರತದ ಈ ಹಿಂದಿನ ಹಲವು ಮುಖ್ಯ ನ್ಯಾಯಾಧೀಶರ ಹೆಸರು ಸೇರಿರುತ್ತದೆ ಎಂದು ವಿಷಾದ ಹಾಗೂ ಆಕ್ರೋಶದಿಂದ ಭಾರತದ ನ್ಯಾಯಾಂಗದ ಅವನತಿಯ ವಿಶ್ಲೇಷಣೆ ಮಾಡಿದ್ದರು. ಭಾರತದ ಪ್ರಜಾತಂತ್ರದ ಅವನತಿಗೆ ಕಾರಣರಾದ ಪಟ್ಟಿಯಲ್ಲಿ ಯಾರ ಹೆಸರು ಇದ್ದರೂ, ಇರದಿದ್ದರೂ ನ್ಯಾ. ಚಂದ್ರಚೂಡರ ಹೆಸರು ಮಾತ್ರ ಖಂಡಿತಾ ಇರುತ್ತದೆ. ಚಂದ್ರಚೂಡರು ಹತಾಶ ಭಾರತದ ಮತ್ತೊಂದು ಅತಿ ದೊಡ್ಡ ನಿರಾಶೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply