2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಬಗ್ಗೆ ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿಕೊಳ್ಳುವ ಅವಕಾಶವು ಫಲಿತಾಂಶದ ಸ್ವರೂಪದಲ್ಲೇ ಇದೆ. ಈ ಬಾರಿ ನರೇಂದ್ರ ಮೋದಿಯವರ ಹತ್ತು ವರ್ಷದ ಆಡಳಿತಾವಧಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವ ಭಾರತದ ಜನತೆ, ಬಿಜೆಪಿಯನ್ನು ಏಕೈಕ ಅತಿ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿದ್ದರೂ ಸರಳ ಬಹುಮತವನ್ನೂ ನೀಡದೆ ಮಿತ್ರಪಕ್ಷಗಳ ಮುಲಾಜಿನೊಂದಿಗೆ ಸರ್ಕಾರ ನಡೆಸಬೇಕೆಂಬ ಆದೇಶ ನೀಡಿದೆ.
ಬಿಜೆಪಿಗೆ ಈ ಬಾರಿ ಬಹುಮತ ಬಂದಿಲ್ಲವಾದ್ದರಿಂದ, ಮತ್ತು ಈ ಸರ್ಕಾರ ತೆಲುಗುದೇಶಂ ಮತ್ತು ಜೆಡಿಯು ಬೆಂಬಲವನ್ನು ಆಶ್ರಯಿಸಿದೆಯಾದ್ದರಿಂದ ಹಾಗೂ ಮೋದಿಯವರಿಗೆ ಸಮ್ಮಿಶ್ರ ಸರ್ಕಾರ ನಡೆಸಿ ಗೊತ್ತಿಲ್ಲವಾದ್ದರಿಂದ ಈ ಬಾರಿ ಮೊದಿ ಪ್ರಧಾನಿಯಾಗುವುದಿಲ್ಲ. ಬದಲಿಗೆ ಬಿಜೆಪಿಯಲ್ಲಿ ಇದ್ದಿದ್ದರಲ್ಲಿ ವ್ಯಕ್ತಿಗತ ಠೇಂಕಾರವಿಲ್ಲದೆ ಮತ್ತು ಇದ್ದಿದ್ದರಲ್ಲಿ ಮಿತ್ರ ಪಕ್ಷಗಳನ್ನು ಜೊತೆಗೆ ಕರೆದೊಯ್ಯಬಲ್ಲ ನಿತಿನ್ ಗಡ್ಕರಿಯಂಥವರು ಪ್ರಧಾನಿಯಾಗಬಹುದು ಎಂಬ ಅಂದಾಜನ್ನು ಕೆಲವರು ಮಾಡಿದ್ದರು. ಅಷ್ಟು ಮಾತ್ರವಲ್ಲದೆ ಬಹುಮತವಿಲ್ಲದ ಮೋದಿಯ ವಿರುದ್ಧ ಬಿಜೆಪಿಯೊಳಗೂ ಭಿನ್ನಮತ ಸ್ಪೋಟಗೊಳ್ಳುತ್ತದೆ, ಆರೆಸ್ಸೆಸ್ ಮತ್ತು ಬಿಜೆಪಿ ನಡುವೆಯೂ ಮುಸುಕಿನಲ್ಲಿರುವ ಸಂಘರ್ಷ ಬಯಲಿಗೆ ಬರುತ್ತದೆ, ಎಂಬೆಲ್ಲಾ ವಾದಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದ್ದವು.
ಆದರೆ ಈ ಬಾರಿ ನರೇಂದ್ರ ಮೋದಿ ಫಲಿತಾಂಶ ಬಂದಮೇಲೆ ಮೊದಲು ಮಾಡಬೇಕಾದ ಬಿಜೆಪಿಯ ಸಂಸದೀಯ ಪಕ್ಷದ ಸಭೆಯನ್ನೇ ಕರೆಯಲಿಲ್ಲ. ಅಲ್ಲಿ ಬಿಜೆಪಿಯ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾಗದೇ, ನೇರವಾಗಿ ಎನ್ಡಿಎ ಸಭೆಯನ್ನು ಕರೆದು ಅಲ್ಲಿ ಅವಿರೋಧವಾಗಿ ಎನ್ಡಿಎ ಕೂಟದ ನಾಯಕನಾಗಿ ಆಯ್ಕೆಗೊಂಡರು. ಆ ಮೂಲಕ ಬಿಜೆಪಿಯೊಳಗಿನ ಭಿನ್ನಮತೀಯರು ಈಗಲೂ ಎಷ್ಟು ಬಲಹೀನರು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ನಂತರ ಎನ್ಡಿಎ ಯ ಮಂತ್ರಿಮಂಡಲ ರಚನೆ. 2014 ರಲ್ಲಿ ಬಿಜೆಪಿಗೆ ಬಹುಮತ ಬಂದಾಗಲೂ, ಎನ್ಡಿಎ ಸರ್ಕಾರದಲಿ ಮೊದಿಯೊಂದಿಗೆ 48 ಮಂತ್ರಿಗಳು, 2019 ರಲ್ಲಿ 56 ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿ 72 ಜನರ ಪೂರ್ಣ ಮಂತ್ರಿಮಂಡಲ ಮೋದಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸಿತು.
72 ಮಂತ್ರಿಗಳಲ್ಲಿ 60 ಮಂತ್ರಿಗಳು ಬಿಜೆಪಿಯವರು. ಮಿತ್ರ ಪಕ್ಷಗಳಾದ ಜೆಡಿಯು ಮತ್ತು ತೆಲುಗು ದೇಶಂಗೆ ತಲಾ ಎರಡು ಮಂತ್ರಿಗಳನ್ನು , ಉಳಿದ ಸಹಭಾಗಿ ಪಕ್ಷಗಳಿಗೆ ತಲಾ ಒಂದೊಂದು ಮಂತ್ರಿ ಪದವಿಯನ್ನು ಮೋದಿಯವರು ದಯಪಾಲಿಸಿದ್ದಾರೆ. ಹೀಗಾಗಿ ಈ ಮೋದಿ 3.0 ಮಂತ್ರಿಮಂಡಲ ಬಿಜೆಪಿ ಬಲಹೀನವಾಗಿರುವ ಯಾವ ಸೂಚನೆಯನ್ನು ನೀಡುತ್ತಿಲ್ಲ. ಈ ಸರ್ಕಾರದ ಅತ್ಯಂತ ದುರ್ಬಲ ಸಹಭಾಗಿ ಪಕ್ಷಗಳಾಗಿರುವ ಶಿಂಧೆಯ ಶಿವಸೇನೆ ಮತ್ತು ಅಜಿತ್ ಪವಾರಿನ ಎನ್ಸಿಪಿಗಳು ತಮಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಗೊಣಗುಟ್ಟಿರುವುದು ಬಿಟ್ಟರೆ ಪ್ರಧಾನ ಮಿತ್ರಪಕ್ಷಗಳಾದ ಜೆಡಿಯು ಮತ್ತು ತೆಲುಗುದೇಶಂ ಯಾವ ಅಸಮಾಧಾನವನ್ನೂ ತೋರಿಲ್ಲ.
NDA ಮಂತ್ರಿಮಂಡಲವೋ? ಮುಂದುವರೆದ ಮೋದಿಮಂಡಲವೋ?
ಇನ್ನು ಇಲಾಖಾ ಹಂಚಿಕೆಯನ್ನು ನೋಡಿದರೆ- ಇದು ಮತ್ತಷ್ಟು ಗರ್ವಿಷ್ಟವಾಗಿರುವ ಮೋದಿ.3.0 ಸರ್ಕಾರ ಎಂಬುದು ಸಾಬೀತಾಗಿದೆ. ಮೊದಲನೆಯದಾಗಿ ಕಳೆದ ಹತ್ತು ವರ್ಷಗಳಲ್ಲಿ ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಈ ದೇಶದಲ್ಲಿ ಭಿನಾಭಿಪ್ರಾಯ ಮತ್ತು ಪ್ರತಿರೋಧಗಳನ್ನು ಹತ್ತಿಕ್ಕಿ, ಮುಸ್ಲಿಮರನ್ನು, ರೈತಾಪಿಯನ್ನು ಮತ್ತು ದಲಿತರನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ದಮನ ಮಾಡಿತ್ತು. ಈ ಚುನಾವಣೆಯಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಬಹಳಷ್ಟು ಸ್ಥಾನಗಳನ್ನು ಕಳೆದುಕೊಂಡಿದ್ದು ದಲಿತರು ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಮತ್ತು ಮುಸ್ಲಿಮರು ಹಿಂದೆಂದಿಗಿಂತಲೂ ಒಟ್ಟಾಗಿ ಮತ್ತು ವ್ಯೂಹಾತ್ಮಕವಾಗಿ ಪ್ರತಿ ಪಕ್ಷಗಳಿಗೆ ಓಟು ಹಾಕಿದ್ದಕ್ಕಾಗಿ. ಈ ದಮನದ ರೂವಾರಿ ಗೃಹಮಂತ್ರಿ ಅಮಿತ್ ಶಾ. ಎಲ್ಲಿಯ ತನಕವೆಂದರೆ ಈಗ ಸರ್ಕಾರದ ಮಿತ್ರ ಪಕ್ಷಗಳಾಗಿರುವ ತೆಲುಗು ದೇಶಂ ಮತ್ತು ಜೆಡಿಯು ಬಿಜೆಪಿಯ ಮಡಿಲಿಗೆ ಬರುವ ಮುನ್ನ ಆ ಪಕ್ಷಗಳ ನಾಯಕರನ್ನೂ ಅಮಿತ್ ಶಾ ಕಾಡಿದ್ದರಿಂದ, ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಬೇಕಾಬಿಟ್ಟಿ ಬಳಸಿದ್ದರಿಂದ ಮಿತ್ರ ಪಕ್ಷಗಳೂ ಕೂಡ ಈ ಬಾರಿ ಅಮಿತ್ ಶಾ ಮಂತ್ರಿ ಮಂಡಲದಲ್ಲಿ ಇರಬಾರದೆಂದು ಒತ್ತಡ ಹಾಕಬಹುದೆಂದು ಊಹಾಪೋಹಗಳನ್ನು ಹರಿಬಿಡಲಾಗಿತ್ತು. ಅಮಿತ್ ಶಾ ಮಂತ್ರಿಯಾದರೂ ಗೃಹಮಂತಿಯಾಗಲಾರರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವೆಲ್ಲವೂ ಕೇವಲ ಊಹಾಪೋಹಗಳೆಂದು ರುಜುವಾತಾಗಿ ಅಮಿತ್ ಶಾ ಅವರೇ ಸತವಾಗಿ ಮೋದಿ.3.0 ಸರ್ಕಾರದ ಗೃಹಮಂತ್ರಿಯಾಗಿದ್ದಾರೆ.
ಅದೇರೇತಿ ಈ ದೇಶದ ಆರ್ಥಿಕತೆ ದಿಕ್ಕಾಪಲಾಗಲು ಕಾರಣವೇ ಮೋದಿ ಸರ್ಕಾರದ ಆರ್ಥಿಕ ನೀತಿ. ಈ ಚುನಾವಣೆಯಲ್ಲಿ ಮತದಾರರು ನಿರುದ್ಯೋಗ ಮತ್ತು ಹಣದುಬ್ಬರ ತಮ್ಮ ಪ್ರಧಾನವಾದ ಸಮಸ್ಯೆಗಳೆಂದು ಪಟ್ಟಿ ಮಾಡಿದ್ದರೆಂದು ಎಲ್ಲಾ ವರದಿಗಳೂ ಹೇಳುತ್ತವೆ. ಅದರಲ್ಲೊ ವಿಶೇಷವಾಗಿ CSDS ವರದಿಗಳು. ಮೋದಿ ಸರ್ಕಾರದ ಈ ಆರ್ಥಿಕ ನೀತಿಗಳನ್ನು ಜಾರಿ ಮಾಡಿದ ರೂವಾರಿ ನಿರ್ಮಲಾ ಸೀತಾರಾಮನ್. ಅವರೇ ಈ ಬಾರಿಯೂ ಹಣಕಾಸು ಮಂತ್ರಿಯಾಗಿ ಮುಂದುವರೆದಿದ್ದಾರೆ. ಮೋದಿ ಅವಧಿಯಲ್ಲಿ ಚೀನಾ ದೇಶವು ಗಾಲ್ವಾನ್ ಪ್ರದೇಶದಲ್ಲಿ ಭಾರತದ 4000 ಕಿಮಿ ಪ್ರದೇಶವನ್ನು ಕಬಳಿಸಿ ಕೂತಿದೆ. ಪಶ್ಚಿಮ ಮತ್ತು ಪೂರ್ವ ಹಾಗೂ ಉತ್ತರದ ಗಡಿಗಳೆಲ್ಲವೂ ಹೆಚ್ಚೂ ಕಡಿಮೆ ಮೋದಿ ಅವಧಿಯಲ್ಲಿ ಉದ್ವಿಘ್ನವಾಗಿತ್ತು. ಆದರೂ ಆಗಲೂ ಈಗಲೂ ರಕ್ಷಣಾ ಮಂತ್ರಿ ಅದೇ ರಾಜನಾಥಸಿಂಗ್.
ಮೋದಿ ಅವಧಿಯಲ್ಲಿ ಭಾರತದ ನೆರೆಹೊರೆಯ ದೇಶಗಳೆಲ್ಲಾ ಭಾರತ ವಿರೋಧಿ ಮತ್ತು ಚೀನಾ ಪರ ಆದವು. ಇಸ್ರೇಲ್ ಮತ್ತು ರಷ್ಯಾಗಳು ಮಾಡಿರುವ ಅಕ್ರಮಣ ಹಾಗೂ ಅತಿಕ್ರಮಣಗಳನ್ನು ಸಮರ್ಥಿಸುತ್ತಾ ಭಾರತವು ಈ ಆವಧಿಯಲ್ಲಿ ಜಗತ್ತಿನ ಬಡರಾಷ್ಟ್ರಗಳೆಲ್ಲದರ ವಿಶ್ವಾಸ ಕಳೆದುಕೊಂಡಿತು. ಆದರೂ ಮೊದಿ. 2.0 ನಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ ಜೈ ಶಂಕರ್ ಅವರೇ ಮೋದಿ. 3.0 ರಲ್ಲೂ ವಿದೇಶಾಂಗ ಮಂತ್ರಿ. ಅಷ್ಟು ಮಾತ್ರವಲ್ಲ. ದೇಶದ ರಾಜಕೀಯ ಮತ್ತು ಆರ್ಥಿಕತೆಗಳ ದಿಕ್ಕನ್ನು ನಿರ್ಧರಿಸುವ ಮತ್ತು ಅನುಷ್ಠಾನಕ್ಕೆ ತರುವ ಎಲ್ಲಾ ಪ್ರಮುಖ ಹತ್ತು ಮಂತ್ರಿ ಸ್ಥಾನಗಳಲ್ಲೂ ಬಿಜೆಪಿಯ ಹಳೇ ಮಂತ್ರಿಗಳೆ ಮುಂದುವರೆದಿದ್ದಾರೆ. ಅವೆಲ್ಲಕ್ಕೊ ಮುಕುಟವಾಗಿದ್ದಂತೆ ಯಾವ ಪ್ರಧಾನಿಯ ನೀತಿಗಳ ವಿರುದ್ದ ಜನ ಅಸಮಾಧಾನ ತೋರಿದ್ದರೋ ಅದೇ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆದಿದ್ದಾರೆ. ಹೀಗಾಗಿ ಇಂದು ರೂಪುಗೊಂಡಿರುವ ಸರ್ಕಾರ ತಾಂತ್ರಿಕವಾಗಿ ಸಮ್ಮಿಶ್ರ NDA ಸರ್ಕಾರವಾಗಿದ್ದರೂ, ಸಾರದಲ್ಲಿ ಅದು ಮೊದಿ 1.0, 2.0, ಗಳ ಮುಂದುವರೆಕೆಯೇ ಆಗಿರುವ ಮೋದಿ. 3.0 ಸರ್ಕಾರವೇ ಆಗಿದೆ. ಈ ಸರ್ಕಾರದ ನೀತಿ ರೀತಿಗಳಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲವೆಂಬುದು ಮಂತ್ರಿಮಂಡಳವನ್ನು ಮತ್ತು ಇಲಾಖೆಯನ್ನು ನೋಡಿದರೆ ಸ್ಪಷ್ಟವಾಗುತ್ತದೆ.
ಇದರ ಜೊತೆಗೆ ಈ ಮೋದಿತ್ವದ ಮುಂದುವರಿಕೆಯನ್ನು ಎತ್ತಿ ತೋರಿಸುವ ಮತ್ತೊಂದು ಅಂಶವೆಂದರೆ ಸ್ವಾತಂತ್ರ್ಯಾ ನಂತರದಲ್ಲೇ ಮೊಟ್ಟ ಮೊದಲಬಾರಿಗೆ ಈ ಬಾರಿ ಕೇಂದ್ರ ಮಂತ್ರಿ ಮಂಡಳದಲ್ಲಿ ಈ ದೇಶದಲ್ಲಿ ಶೇ. 16 ರಷ್ಟು ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯದಿಂದ ಒಬ್ಬ ಮುಸ್ಲಿಂ ಮಂತ್ರಿಯೂ ಇಲ್ಲದಿರುವುದು. ಹಾಗೇ ನೋಡಿದರೆ ಮೋದಿ. 1.0 ದಲ್ಲಿ ಇಬ್ಬರು ಮುಸ್ಲಿಂ ಮಂತ್ರಿಗಳಿದ್ದರು, ಮೋದಿ. 2.0 ದಲ್ಲಿ ಒಬ್ಬರಾದರೂ ಇದ್ದರು. ಆದರೆ ಸಾಪೇಕ್ಷವಾಗಿ ಸಂಖ್ಯಾ ಶಕ್ತಿ ಕಳೆದುಕೊಂಡಿರುವ ಮೋದಿ. 3.0 ಸರ್ಕಾರದಲ್ಲಿ ಒಬ್ಬ ಮುಸ್ಲಿಂ ಮಂತ್ರಿಯೂ ಇಲ್ಲ. ಇದರ ಬಗ್ಗೆ ಮಿತ್ರ ಪಕ್ಷಗಳಿಗೂ ಯಾವುದೇ ಆಕ್ಶೇಪವಿಲ್ಲ ಎಂಬುದು ಈ ಸರ್ಕಾರವು ಮೋದಿ 2.0 ರ ಮುಂದುವರೆಕೆಯೇ ಹೊರತು, ಬದಲಾದ ಸರ್ಕಾರವಲ್ಲ ಎಂದು ಹೇಳುತ್ತದೆ.
ಮಿತ್ರ ಪಕ್ಷಗಳು ಕೋಮುವಾದಕ್ಕೂ, ಕಾರ್ಪೊರೇಟ್ವಾದಕ್ಕೂ ಕೂಡ ಮಿತ್ರರೇ!
ಮೋದಿ. 3.0 ಸರ್ಕಾರದಲ್ಲಿ ಈ ಹಿಂದಿನ ಮೋದಿ ಅವಧಿಗಳಂತೆ ಹೆಚ್ಚಿನ ಕೋಮುವಾದ ಮತ್ತು ಆದಾನಿ-ಆಂಬಾನಿ ಪರತೆಗಳು ಇರುವುದಿಲ್ಲ ಹಾಗೂ ನಿಧಾನವಾಗಿ ಪ್ರಜಾತಂತ್ರ ಹಿಂದಿರುತುವ ಸಾಧ್ಯತೆಗಳಿವೆ ಎಂದು ಅಸಹಾಯಕ iಕ ಆಶಾವಾದಿಗಳು ಭಾವಿಸುತ್ತಾರೆ. ಅದಕ್ಕೆ ಇರುವ ಮತ್ತೊಂದು ಕಾರಣ ಈ ಬಾರಿ ಬಿಜೆಪಿಗೆ ಬಹುಮತ ಇಲ್ಲದಿರುವುದು ಮತ್ತು ಪ್ರಧಾನವಾಗಿ ಸರ್ಕಾರ ತೆಲುಗು ದೇಶಂ ಮತ್ತು ಜೆಡಿಯು ಪಕ್ಷಗಳನ್ನು ಅವಲಂಬಿಸಬೇಕಿರುವುದು. ಆದರೆ ಕೇಳಬೇಕಿರುವ ಪ್ರಶ್ನೆ ತೆಲುಗು ದೇಶಂ ಆಗಲೀ ಅಥವಾ ಜೆಡಿಯು ಆಗಲೀ ಕೋಮುವಾದ ಮತ್ತು ಕಾರ್ಪೊರೇಟ್ ವಾದದ ವಿರೋಧಿಗಳೇ ಎಂಬುದು? ತೆಲುಗು ದೇಶಂ, ಜೆಡಿಯು ಮತ್ತು ಬಿಜೆಪಿ ಗಳ ಮೈತ್ರಿಕೂಟ ಚುನವಣೋತ್ತರ ಮೈತ್ರಿಕೂಟವಲ್ಲ. ಚುನಾವಣಾಪೂರ್ವ NDA ಮೈತ್ರಿಕೂಟ. ಹೀಗಾಗಿ ಈ ಪಕ್ಷಗಳು ಬಿಜೆಪಿಯ ಕೋಮುವಾದ ಮತ್ತು ಕಾರ್ಪೊರೇಟ್ ವಾದಗಳನ್ನು ಒಪ್ಪಿಕೊಂಡೇ ಈ ಮೈತ್ರಿಯನ್ನು ಮಾಡಿಕೊಂಡಿವೆ. ಹೀಗಾಗಿಯೇ ಪ್ರಧಾನಿಯನ್ನು ಒಳಗೊಂಡಂತೆ ಬಿಜೆಪಿಯ ನಾಯಕರು ಚುನಾವಣಾ ಪ್ರಚಾರದುದ್ದಕ್ಕೂ ಮುಸ್ಲಿಂ ವಿರೋಧಿ ವಿಷವನ್ನು ಕಕ್ಕುತ್ತಿದ್ದರೂ ನಾಯ್ದು ಆಗಲೀ, ನಿತೀಶ್ ಆಗಲೀ ಅದರ ಬಗ್ಗೆ ಸಣ್ಣ ಕೊಂಕನ್ನೂ ತೆಗೆದಿಲ್ಲ.
ನಾಯ್ದುವಂತೂ ಆಂಧ್ರದಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿಯನ್ನು ಒದಗಿಸುವ ಭರವಸೆಯನ್ನು ಕೊಡುತ್ತಿದ್ದರೂ, ಮುಸ್ಲಿಂ ಮೀಸಲಾತಿಯನ್ನು ಕಿತ್ತುಹಾಕುವ ಘೋಷಣೆ ಮಾಡುತ್ತಿದ್ದ ಮೋದಿ ಮತ್ತು ಶಾ ಅವರುಗಳ ಜೊತೆ ಯಾವುದೇ ಎಗ್ಗುಸಿಗ್ಗಿಲ್ಲದೆ ವೇದಿಕೆ ಹಂಚಿಕೊಳ್ಳುತ್ತಿದ್ದರು. ಇದಲ್ಲದೆ ಮೋದಿ 1.0 ಮತ್ತು ಮೋದಿ. 2.0 ಅವಧಿಯಲ್ಲೂ ಮೋದಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿರಲಿಲ್ಲ. ಆಗೆಲ್ಲಾ ಬಿಜೆಪಿಯ ಅತ್ಯಂತ ಕೋಮುವಾದಿ ಮಸೂದೆಗಳಾದ ಯುಎಪಿಎ ತಿದ್ದುಪಡಿ, ಆರ್ಟಿಕಲ್ 370 ರದ್ದು, ತ್ರಿವಳಿ ತಲ್ಲಾಕ್, ದೆಹಲಿ ಸ್ಥಾನಮಾನ , ಚುನಾವನಾ ಅಯೋಗ ಪುನರ್ರಚನೆ ಮಸೂದೆ ಇನ್ನಿತ್ಯಾದಿ ಜನವಿರೋಧಿ ಮಸೂದೆಗಳಿಗೆ ರಾಜ್ಯ ಸಭೆಯಲ್ಲಿ ಬಹುಮತ ಸಿಗುವಂತಾದದ್ದು ಜೆಡಿಯು ಮತ್ತು ತೆಲುಗು ದೇಶಂ ಪಕ್ಷಗಳ ಬೆಂಬಲದಿಂದಾಗಿಯೇ.. ಈ ಬಾರಿ ಅಧಿಕಾರಕೆ ಬಂದಿರುವ NDA ಒಕ್ಕೂಟದ ಪ್ರಥಮ ಸಭೆಗೆ ಬಂದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸೀದಾ ಮೋದಿಯ ಕಾಲಿಗೆ ಬಗ್ಗಿ ನಮಸ್ಕಾರ ಮಾಡಿದ್ದು ಜೆಡಿಯು ಅಧಿಕಾರಕ್ಕಾಗಿ ಎಷ್ಟು ಬಗ್ಗಬಹುದು ಎಂಬುದಕ್ಕೂ ಉದಾಹರಣೆಯಾಗಿದೆ.
ಚಂದ್ರಬಾಬು ನಾಯುಡವಂತೂ ವಿಶ್ವಬ್ಯಾಂಕ್ ಆದೇಶದಂತೆ ರಾಜ್ಯದಲ್ಲಿ ಅಮೂಲಾಗ್ರವಾಗಿ ಕಾರ್ಪೊರೇಟ್ ಪರ ಬದಲಾವಣೆಗಳನ್ನು ತಂದ ಪ್ರಪ್ರಥಮ ಮುಖ್ಯಮಂತ್ರಿ. ಒಂದು ಸರ್ಕಾರ ಹೇಗೆ ಕಾರ್ಪೊರೇಟ್ ಶಕ್ತಿಗಳ ಅಡಿಯಾಳಾಗಬಹುದು ಎಂಬುದಕ್ಕೆ ನಾಯ್ಡು ಆಡಳಿತ ಇಡೀ ದೇಶಕ್ಕೆ ಒಂದು ಕೆಟ್ಟ ಉದಾಹರಣೆಯಾಗಿತ್ತು. ಹೀಗಾಗಿ ಅವರ ಆಂಧ್ರ ಮಾದರಿ ಗುಜರಾತ್ ಮಾದರಿಯ ತಾಯಿ. ಅವರು 1999-2004 ರ ನಡುವೆ ಕೇಂದ್ರದಲ್ಲಿ ರೂಪುಗೊಂಡಿದ 24 ಪಕ್ಷಗಳ ವಾಜಪೇಯಿ ನೇತೃತ್ವದ NDA ಒಕ್ಕೂಟದ ಸಂಚಾಲಕರು ಆಗಿದ್ದರು. ಅದೇ ಅವಧಿಯಲ್ಲಿ ಗುಜರಾತಿನಲ್ಲಿ ಮೋದಿ ನೇತೃತ್ವದಲ್ಲಿ ಮುಸ್ಲಿಮರ ನರಮೇಧ ನಡೆದರೂ ನಾಯ್ಡು ಪಕ್ಷ ಅದರ ಬಗ್ಗೆ ವಿರೋಧವನ್ನೇನು ವ್ಯಕ್ತಪಡಿಸಿರಲಿಲ್ಲ. ಹಾಗೆಯೇ ನಾಯ್ಡು ಅವಧಿಯಲ್ಲಿ ನಕ್ಸಲೈಟರ ಹೆಸರಲ್ಲಿ ಆಂಧ್ರದ ಆದಿವಾಸಿಗಳನ್ನು ದಮನ ಮಾಡಿ, ಎನ್ಕೌಣ್ಟರ್ ನಡೆಸಿ ಅ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳನ ಗಣಿ ಉದ್ಯಮವನ್ನು ನಡೆಸಲು ಪರವಾನಗಿ ಕೊಡುತ್ತಿದ್ದ ನೀತಿಗೆ ಬಿಜೆಪಿಯೂ ಸದಾ ಬೆಂಬಲವನ್ನು ವ್ಯಕ್ಪಡಿಸಿತ್ತು.
ಹೀಗಾಗಿ ಬಿಜೆಪಿ, ಜೆಡಿಯು ಮತ್ತು ತೆಲುಗುದೇಶಂ ಮೈತ್ರಿಯಲ್ಲಿ ಬಿಜೆಪಿ ಪರವಾದ ಕೋಮುವಾದಿ ಮತ್ತು ಕಾರ್ಪೊರೇಟ್ವಾದಿ ರಾಜಕೀಯದ ಅಂಟು ಮತ್ತು ನಂಟೂ ಇದೆ. ಇದಲ್ಲದೆ ನಾಯ್ಡು ಮತ್ತು ನಿತೀಶ್ ಇಬ್ಬರಿಗೂ ತಮ್ಮ ತಮ್ಮ ರಾಜ್ಯಗಳಿಗೆ ಹೆಚ್ಚು ಅಧಿಕಾರ ಮತ್ತು ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಅಗತ್ಯದ ಮುಂದೆ ಮಿಕ್ಕಿದ್ದೆಲ್ಲ ಸದ್ಯಕ್ಕೆ ಅಮುಖ್ಯವಾಗಿದೆ. ಆಂಧ್ರಕ್ಕೆ ವಿಶೇಷ ವರ್ಗದ ರಾಜ್ಯ ಸ್ಥಾನಮಾನ ಪಡೆದುಕೊಳ್ಳುವುದು ನಾಯ್ಡುವಿನ ತುರ್ತು ಕಾಳಜಿ. 2014 ರಲ್ಲಿ ಅವಿಭಜಿತ ಆಂಧ್ರಪ್ರದೇಶ ತೆಲಂಗಾಣ ಮತ್ತು ಆಂಧ್ರವೆಂದು ವಿಭಜನೆಯಾದ ಮೇಲೆ ಆಂಧ್ರ ತನ್ನ ಪ್ರಮುಖ ತೆರಿಗೆ ಮೂಲವಾಗಿದ್ದ ಹೈದರಾಬಾದನ್ನು ಕಳೆದುಕೊಂಡಿತು. ಆಗಿನಿಂದಲೂ ಸೆಶಲ್ ಕೆಟಗರಿ ಸ್ಟೇಟ್ ಸ್ಥಾನಕ್ಕೆ ನಾಯ್ಡು ಒತ್ತಾಯಿಸುತ್ತಿದ್ದರು. 2014 ರಲ್ಲಿ ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅದನ್ನು ಕೊಡುವುದಾಗಿ ಭರವಸೆ ಇತ್ತಿದ್ದರೂ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ನಾಯ್ಡು ಮಿತ್ರಪಕ್ಷವಾಗಿದ್ದರೂ ವಿಶೇಷ ಸ್ಥಾನಮಾನ ನಿರಾಕರಿಸಿತು. 2018 ರಲ್ಲಿ ವಿಭಜಿತ ಆಂಧ್ರದ ಚುನಾವಣೆ ಒಂದು ವರ್ಷವಿರುವಾಗ ನಾಯ್ಡು ಬಿಜೆಪಿಯ ಈ ನಿಲುವನ್ನು ವಿರೋಧಿಸಿ ಹೊರಬಂದರು. ಈಗ ಮತ್ತೊಮ್ಮೆ ಒಕ್ಕೂಟದಲ್ಲಿರುವ ನಾಯ್ಡುವಿನ ಪ್ರಧಾನ ಕಾಳಜಿ ಕೋಮುವಾದವೂ ಅಲ್ಲ. ಜನಪರ ನೀತಿಗಳೊ ಆಲ್ಲ. ಕೇಂದ್ರದಿಂದ ಹೆಚ್ಚು ಹಣಪಡೆದುಕೊಂಡು ಆಂಧ್ರವನ್ನು ಕಾರ್ಪೊರೇಟು ಗಳ ಹೊಸ ರಾಜಧಾನಿಯನ್ನಾಗಿ ಮಾಡುವುದು. ಆ ಮೂಲಕ ತನ್ನ ಹಾಗೂ ಪಕ್ಷದ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದೇ ಆಗಿದೆ.
ಬಿಹಾರದಲ್ಲಿ ಜೆಡಿಯು ಜಾತಿ ಜಗಣತಿಯನ್ನು ದೇಶಾದ್ಯಂತ ನಡೆಸಲು ಮತ್ತು ಅಗ್ನಿಪಥ್ ಯೋಜನೆಯನ್ನು ಮರು ಪರಿಶೀಲಿಸಲು ಒತಾಯವನ್ನೇನೋ ಮಾಡಿದೆ. ಆದರೆ ಮರುದಿನವೇ ಅದರ ಬಗ್ಗೆ ಸಮಜಾಯಿಶಿ ಕೊಟ್ಟಿರುವ ಆ ಪಕ್ಷದ ಹಿರಿಯ ನಾಯಕ ತ್ಯಾಗಿಯವರು ತಾವು ಅಗ್ನಿಪಥದ ಕೆಲವು ನಿಯಮಗಳ ಮರು ಪರಿಶೀಲನೆಯನ್ನು ಮಾತ್ರ ಒತ್ತಾಯಿಸುತ್ತಿದೆವೆಯೆಂದೂ, ಸಮಾನ ನಾಗರಿಕ ಸಂಹಿತೆ ಯ ಬಗ್ಗೆ ವಿಶಾಲ ಸಮಾಲೋಚನೆ ನಡೆಸಬೇಕು ಎಂಬುದು ತಮ್ಮ ಪಕ್ಷದ ನಿಲುವೇ ಹೊರತು ತಮ್ಮ ಪಕ್ಷಕ್ಕೆ ಯುಸಿಸಿ ಗೆ ವಿರೋಧವಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ. ಇದಲ್ಲದೇ 2025 ರಲ್ಲಿ ಬಿಹಾರದಲ್ಲಿ ಶಾಸನಾ ಸಭಾ ಚುನಾವಣೆ ನಡೆಯಲಿದೆ. ಅದರಲ್ಲಿ ಗೆಲ್ಲಬೇಕೆಂದರೂ ನಿತ್ರಾಣವಾಗಿರುವ ಜೆಡಿಯು ಗೆ ಬಿಜೆಪಿಯ ಸಹಕಾರ ಮತ್ತು ಸಂಪನ್ಮೂಲಗಳ ಅಗತ್ಯವಿದೆ. ಹೇಗಿದ್ದರೂ ನಿತೀಶರ ನಂತರ ಇಡೀ ಜೆಡಿಯು ವನ್ನು ಗೌರವಾನಿತ್ವವಾಗಿ ಕಬಳಿಸುವ ದೂರಗಾಮಿ ಯೋಜನೆ ಬಿಜೆಪಿಗೆ ಇದ್ದೇ ಇದೆ. ಹೀಗಾಗಿ ಈ ಮೋದಿ 3.0 ಸರ್ಕಾರಕ್ಕೆ ಈ ಮೈತ್ರಿ ಪಕ್ಷಗಳಿಂದ ಯಾವುದೇ ತಾತ್ವಿಕ ಅಥವಾ ರಾಜಕೀಯ ವಿರೋಧವಿರುವುದಿಲ್ಲ.
ಮೇಲಾಗಿ ಈ ಒಕ್ಕೂಟವನ್ನು ತೊರೆದರೂ ಈ ಅವಕಾಶವಾದಿ ಪಕ್ಷಗಳಿಗೆ ಇರುವ ಪರ್ಯಾಯವಾದರೂ ಏನು? ಈ ಎಲ್ಲಾ ಪಕ್ಷಗಳು ಇಂಡಿಯಾ ಒಕ್ಕೂಟವನ್ನು ಸೇರಿದರೂ ಅದು ಸರ್ಕಾರ ರಚಿಸುವುದು ಕಷ್ಟ. ಈ ಎಲ್ಲಾ ಅವಕಾಶವಾದಗಳು NDA ಸರ್ಕಾರವನ್ನು ಮೋದಿ. 3.0 ಸರ್ಕಾರವಾಗಿಯೇ ಮುಂದುವರೆಯುವಂತೆ ಮಾಡುತ್ತಿದೆ. ಆದರೂ ಅಗತ್ಯವಿರುವಷ್ಟು ಸಂಪನ್ಮೂಲ ಸಿಗದಿದ್ದರೆ, ಬಿಜೆಪಿಯೇ ತನ್ನ ಮೂಲ ಚಾಳಿಯಂತೆ ಮಿತ್ರಪಕ್ಷಗಳನ್ನು ಒಡೆದು ನುಂಗಿ ಸಂಖ್ಯಾ ಬಲ ಹೆಚ್ಚಿಸಿಕೊಳ್ಳುವ ಸಂಚು ಮಾಡಿದರೆ ಅಥವಾ ಬಿಜೆಪಿಯೇ ತನ್ನದೇ ಕಾರಣಗಳಿಗಾಗಿ ಮಧ್ಯಂತರ ಚುನಾವಣೆಗೆ ಹೋದರೆ ಈ ಸರ್ಕಾರಕ್ಕೆ ಈ ಅವಕಾಶವಾದಿ ಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ.
ಆರೆಸ್ಸೆಸ್ ನ ವಾತ್ಸಲ್ಯದ ವಿರೋಧ
ಇನ್ನು ಆರೆಸ್ಸೆಸ್ಸಿಗೂ ಬಿಜೆಪಿಗೂ ಇರಬಹುದಾದ ಸಂಘರ್ಷ. ಅದಕ್ಕೆ ಮೋದಿಯ ಪ್ರಚಾರ ಮತ್ತು ಮಣಿಪುರದ ಬಗ್ಗೆ ಮೊನ್ನೆ ಭಾಗವತ್ ಅವರು ಪರೋಕ್ಷವಾಗಿ ಮಾಡಿರುವ ಟೀಕೆ ಒಂದು ಉದಾಹರಣೆ. ಆದರೆ ಭಾಗವತರೂ ಈ ಆಕ್ಷೇಪಣೆಗಳನ್ನು ಚುನಾವಣೆಯ ಸಂದರ್ಭದಲ್ಲಿ ಏಕೆ ಎತ್ತಲಿಲ್ಲ.? ಅಲ್ಲದೆ ಮಣಿಪುರದಲ್ಲಿ ಅರಾಜಕ ಹಿಂಸಾಚಾರ ಸೃಷ್ಟಿ ಮಾಡುತ್ತಿರುವರು ಆರೆಸ್ಸೆಸ್ಸಿನ ಗರಡಿಯಲ್ಲಿ ತಯಾರಾದ ಆರಂಭಾಯ್ ತೇಂಗೋಲ್ ಮತ್ತು ಮೈತಿ ಲೀಪುನ್ ಸಂಘಟನೆಗಳೇ ಆಗಿವೆ. ಹೀಗಾಗಿ ಆರೆಸ್ಸೆಸ್ ವಿರೋಧ ಸೋಗಲಾಡಿತನದ್ದು. ಇನ್ನು ಮೋದಿಯ ಬಿಜೆಪಿಗೂ ಹಾಗೂ ಆರೆಸ್ಸೆಸ್ಸಿನ ನಾಯಕರ ನಡುವೆ ಕೆಲವು ವ್ಯಕ್ತಿಗತ ಸಂಘರ್ಷಗಳು ಇರಬಹುದಾದರೂ ಅದು ಬಿಜೆಪಿಯನ್ನು ಮುರಿಯುವಂತದ್ದಲ್ಲ. ಏಕೆಂದರೆ ಆರೆಸ್ಸೆಸ್ಸಿನ ಅಜೇಂಡಾಗಳನ್ನು ಜಾರಿ ಮಾಡುತ್ತಿರುವುದು ಮೋದಿಯ ಬಿಜೆಪಿಯೇ. ಆದ್ದರಿಂದ ಆರೆಸ್ಸೆಸ್ನ ಸಲಹೆಗಳು ಈ ಸಂವಿಧಾನ ವಿರೋಧಿ ಆರೆಸ್ಸೆಸ್ ಅಜೇಂಡಾಗಳನ್ನು ಜಾರಿಗೆ ತರಲು ಬಿಜೆಪಿಯನ್ನು ಇನ್ನಷ್ಟು ಪರಿಣಾಮಾಕಾರಿ ಸಾಧನ ಮಾಡುವ ವಾತ್ಸಲ್ಯದ ಆಕ್ಷೇಪಣೆಗಷ್ಟೇ ಆಗಿವೆ. . ಈ ವೈರುಧ್ಯದಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಮತ್ತು ಈ ದೇಶದ ಜನರಿಗೆ ಯಾವುದೇ ಲಾಭವಿಲ್ಲ..
ಬಿಜೆಪಿಯ ಮತ್ತು ಮೋದಿಯ ಈ ಧಾರ್ಷ್ಟ್ಯಕ್ಕೆ ಕಾರಣವೇನು?
ಹಿಂದೂತ್ವದ ಅಡಿಪಾಯ ಅಲುಗಾಡಿಲ್ಲ!
ಈ ಬಾರಿ ನಿರೀಕ್ಷೆಗಿಂತ ಓಟು ಮತ್ತು ಸೀಟುಗಳು ಕಡಿಮೆ ಬಂದರೂ, ಸರ್ಕಾರಕ್ಕೆ ಇತರ ಪಕ್ಷಗಳನ್ನು ಆಧರಿಸಬೇಕಾಗಿ ಬಂದರೂ ಬಿಜೆಪಿ ಮತ್ತು ಮೋದಿ ತೋರಿಸುತ್ತಿರುವ ಈ ದುರಹಂಕಾರಕ್ಕೆ ಕಾರಣಗಳೇನು? ಇದಕ್ಕೆ ಪ್ರಧಾನವಾದ ಕಾರಣ : ಈ ಚುನಾವಣೆಯಲ್ಲಿ ಮೋದಿಗೆ ಮತ್ತು ಹಿಂದೂತ್ವಕ್ಕೆ ಜನಬೆಂಬಲ ಬಿಜೆಪಿಯ ನಿರೀಕ್ಷೆಯಷ್ಟು ಏರಿಕೆಯಾಗಿಲ್ಲ ಆದರೆ ಹೇಳಿಕೊಳ್ಳುವಷ್ಟು ಕಡಿಮೆಯೂ ಆಗಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಬಿಜೆಪಿ ಈ ಬಾರಿ 370 ಸೀಟುಗಳನ್ನು ಮತ್ತು ಎನ್ಡಿಎ 400 ಸೀಟುಗಳನ್ನು ಪಡೆದುಕೊಳ್ಳುತ್ತದೆ ಎಂದು ಪ್ರಚಾರ ಮಾಡಿಕೊಂಡಿದ್ದರಿಂದ ಅದರ ಸಾಧನೆಯ ಹೋಲಿಕೆಯೂ ಸಹ 400 ಸೀಟುಗಳ ಗುರಿಯೊಂದಿಗೆ ನಡೆಯುತ್ತಿದೆ. ಆದರೆ 2019 ರಲ್ಲಿ ಅದು ಪಡೆದುಕೊಂಡ ಸೀಟು 303 ಮತ್ತು ಓಟು ಶೇರು ಶೇ. 37. ಅದಕ್ಕೆ ಹೋಲಿಸಿದಲ್ಲಿ ಬಿಜೆಪಿ ಈ ಬಾರಿ ಪಡೆದುಕೊಂಡ ಓಟು ಶೇರು ಶೇ. 36.56 . ಅಂದರೆ ಓಟುಗಳ ಪ್ರಮಾಣ ಕಡಿಮೆ ಆಗಿರುವುದು ಕೇವಲ ಶೇ. 0.6 ಮಾತ್ರ. ಒಟ್ಟು ಪ್ರಮಾಣದಲ್ಲಿ ಈಗಲೂ 64 ಕೋಟಿ ಮತದಾರರಲ್ಲಿ 24 ಕೋಟಿ ಜನ ಬಿಜೆಪಿ ಗೆ ಓಟು ಹಾಕಿದ್ದಾರೆ. ಇದಕ್ಕೆ ಕಾರಣ ಬಿಜೆಪಿಯ ಅಧಿಕಾರ ಬಲ, ಸಂಪನ್ಮೂಲ, ಮೀಡಿಯಾ ಬಲ ಮತ್ತು ಅಧಿಕಾರ ದುರ್ಬಳಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅದೇನೂ ಇಲ್ಲದೆ ವಿರೋಧ ಪಕ್ಷಗಳು 232 ಸೀಟುಗಳನ್ನು ಪಡೆದುಕೊಂಡಿರುವುದು ಸಾಧನೆಯೇ.
ಅದೇನೇ ಇದ್ದರೂ ಬಿಜೆಪಿ ಮತ್ತು ವಿರೋಧ ಪಕ್ಷಗಳ ಬೆಂಬಲದ ತಳಹದಿಯ ನಡುವೆ ಈಗಲೂ ದೊಡ್ಡ ಅಂತರವಿದೆ/ ಈ ಬಾರಿ ಕೇವಲ ಶೇ. 1 ರಷ್ಟು ಮತಗಳನ್ನು ಕಳೆದುಕೊಂಡ ಬಿಜೆಪಿ ಕಳೆದುಕೊಂಡ ಸೀಟುಗಳು ಮಾತ್ರ 63. ಆದರೆ ಕಾಂಗ್ರೆಸ್ ಕಳೆದ ಬಾರಿಗೆಗಿಂತ ಹೆಚ್ಚಿಸಿಕೊಂಡ ಮತಗಳು ಕೇವಲ ಶೇ. 2. ಆದರೆ ಹೆಚ್ಚಿಸಿಕೊಂಡ ಸೀಟುಗಳು 47 ! ಹೀಗಾಗಿ ಓಟು ಪ್ರಮಾಣದ ಸಂಖ್ಯೆಯಲ್ಲಿ ಬಿಜೆಪಿ ಕಾಂಗ್ರೆಸ್ಸಿಗಿಂತ ಈಗಲೂ ಎರಡು ಪಟ್ಟು ಹೆಚ್ಚಿದೆ. ಬಿಜೆಪಿಯ ಈ ಮತಶಕ್ತಿ ಇರುವುದು ಅದರ ಸಾಮಾಜಿಕ ಪ್ರಭಾವದಲ್ಲಿ. ಅದನ್ನು ಪಡೆದುಕೊಳ್ಳಲು ಅದು 365 ದಿನಗಳೂ ಮಾಡುವ ಸಂಸ್ಕೃತಿಕ ರಾಜಕಾರಣದಲ್ಲಿ. ಕಾಂಗ್ರೆಸ್ಸಿನ ಬಳಿ ಇದಕ್ಕೆ ಪರ್ಯಾಯವಿಲ್ಲ. ಅದೇ ಬಿಜೆಪಿಯ ದುರಭಿಮಾನದ ಮೂಲ ಕೂಡ. ಉದಾಹರಣೆಗೆ ಬಿಜೆಪಿಗೆ ಅತಿ ಹೆಚ್ಚು ನಷ್ಟವಾಗಿರುವುದು ಉತ್ತರ ಪ್ರದೇಶದಲ್ಲಿ. ಅಲ್ಲಿ ಅದು 2019 ರಲ್ಲಿ 80 ರಲ್ಲಿ 63 ಸೀಟುಗಳನ್ನು ಪಡೆದುಕೊಂಡಿದ್ದರೆ ಈ ಬಾರಿ ಕೇವಲ 33. ಅಂದರೆ 30 ಸೀಟುಗಳ ನಷ್ಟ.
ಆದರೆ 2019 ರಲ್ಲಿ ಬಿಜೆಪಿಯ ಓಟು ಪ್ರಮಾಣ ಶೇ. 49 . ಈ ಬಾರಿ ಅದರ ಓಟು ಪ್ರಮಾಣ ಶೇ. 41 . ಒಟ್ಟಾರೆ ಎನ್ಡಿಎ ಒಕ್ಕೂಟದ ಓಟು ಪ್ರಮಾಣ ಶೇ. 46 . ಇಲ್ಲಿ ಪ್ರಧಾನವಾಗಿ ದಲಿತರು ಸಂವಿಧಾನ ಬದಲಾವಣೆಯ ಘೋಷಣೆಗಳನ್ನು ಕೇಳಿ ಎಸ್ಸಿ ಕಡೆ ಸರಿದರು. ಹಾಗೂ ಯಾದವ ಮತ್ತು ಅತಿ ಹಿಂದುಳಿದ ಜಾತಿಗಳ ಮತದಾರರೂ ಈ ಬಾರಿ ಎಸ್ಪಿ – ಕಾಂಗ್ರೆಸ್ ಇಂಡಿಯಾ ಕೂಟಕೆ ಮತ ಚಲಾಯಿಸಿದರು.
ಕಾಂಗ್ರೆಸ್- ಎಸ್ಪಿ ಮೈತ್ರಿ ಕೂಟಕ್ಕೆ ಶೇ. 43 ಮತಗಳು ಬಂದಿವೆ. ಇದೊಂದು ದೊಡ್ದ ಸಾಧನೆಯೇ. ಆದರೂ ಇಲ್ಲಿ ಮತ ಹಾಕಿದ ಬಹುಪಾಲು ಜನ ಮೋದಿಯನ್ನು ಮೆಚ್ಚಿಕೊಂಡರೂ ಸ್ಥಳೀಯ ಸಂಸದರ ವಿರುದ್ಧ ಮತ ಚಲಾಯಿಸಿದ್ದಾರೆ. ಕೊನೆಯ ಹಂತದ ವೇಳೆಗೆ ಉ,ಪ್ರದೇಶದಲ್ಲಿ ಪ್ರಧಾನಿ ಹುದ್ದೆಗೆ ಮೋದಿಗಿಂತ ಹೆಚ್ಚು ಜನರು ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿದರು ಎಂದು ಸಿಎಸ್ಡಿಎಸ್ ಸರ್ವೇ ಯ ವರದಿ ಹೇಳುತ್ತದೆ.. ಇದೆಲ್ಲದರ ನಡುವೆಯೂ ಹತ್ತು ವರ್ಷಗಳ ನಂತರವೂ ಬಿಜೆಪಿಗೆ ಶೇ. 41 ರಷ್ಟು ಮತಗಳು ಗಟ್ಟಿಯಾಗಿವೆ.
ಹಾಗೆಯೇ ಬಿಜೆಪಿಗೆ ಆಗಿರುವ ಮತ್ತೊಂದು ಮಹಾನಷ್ಟ ಮಹಾರಾಷ್ಟ್ರದಲ್ಲಿ. ಅಲ್ಲಿ 2019 ರಲಿ 23 ಸೀಟುಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ ಕೇವಲ 9 ಸೀಟುಗಳನ್ನು ಪಡೆದುಕೊಂಡಿದೆ. ಆದರೆ 2019 ರಲ್ಲಿ ಶೇ. 27.84 ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ 26.18 ಓಟುಗಳಷ್ಟು ಪಡೆದುಕೊಂಡಿದೆ. ಅಂದರೆ ಸೀಟುಗಳು ಎರಡು ಪಟ್ಟು ಕಡಿಮೆಯಾಗಿದ್ದರೂ ಓಟುಗಳು ಕಡಿಮೆಯಾಗಿರುವುದು ಕೇವಲ ಶೇ.1.6 ಈ ಸೀಟು ಮತ್ತು ಓಟುಗಳ ಪ್ರಮಾಣಗಳ ತಾಳಮೇಳವಿಲ್ಲದ ವ್ಯತ್ಯಾಸಕ್ಕೆ ಕಾರಣ ಭಾರತದಲ್ಲಿ ಅನುಸರಿಸಲಾಗುವ ಇದ್ದವರಲ್ಲಿ ಹೆಚ್ಚು ಮತ ಪಡೆದವರು ಗೆಲ್ಲುವ ಪದ್ಧತಿ. ಇದು ಅಧಿಕಾರವನ್ನು ಯಾರು ಪಡೆಯುತ್ತಾರೆ ಎಂಬುದನ್ನು ನಿರ್ಧರಿಸಿದರೂ, ಸಮಾಜದಲ್ಲಿ ಯಾರು ಎಷ್ಟು ಬೆಂಬಲವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಸುವುದಿಲ್ಲ. ಅದನ್ನು ತಿಳಿಸುವುದು ಓಟು ಶೇರು. ಅದರ ಲೆಕ್ಕದಲ್ಲಿ ನೋಡಿದರೆ ಬಿಜೆಪಿಯ ಸಾಮಾಜಿಕ ತಳಹದಿಗೆ ಮುಕ್ಕಾಗಿಲ್ಲ. ಅದೇರೇತಿ ಭಾರತದ ಪ್ರತಿಷ್ಟಿತ ಅಧ್ಯಯನ ಸಂಸ್ಥೆಯಾಗಿರುವ CSDS ನಡೆಸಿರುವ ಚುನಾವಣೋತ್ತರ ಸಾಮಾಜಿಕ ಅಧ್ಯಯನಗಳು ಕೂಡ ಬಿಜೆಪಿಯ ಸಾಮಾಜಿಕ ತಳಹದಿಗೆ ಭಂಗ ಬಂದಿಲ್ಲವೆಂಬುದನ್ನೇ ಸಾಬೀತುಪಡಿಸುತ್ತದೆ.
ಉತ್ತರ ಪ್ರದೇಶವನ್ನು ಹೊರತುಪಡಿಸಿದರೆ ಒಟ್ಟಾರೆ ಭಾರತದಲ್ಲಿ ಬಿಜೆಪಿಯು ಗ್ರಾಮೀಣ ಭಾರತದಲ್ಲಿ, ಅರೆ ಪಟ್ಟಣ ಮತ್ತು ಪಟ್ಟಣಗಳಲ್ಲಿ, ಶ್ರೀಮಂತರಲ್ಲಿ ಮಾತ್ರವಲ್ಲದೆ ಮಧ್ಯಮ ಹಾಗೂ ಕಾರ್ಮಿಕ ವರ್ಗದಲ್ಲಿ, ಮೇಲ್ಜಾತಿ ಮಾತ್ರವಲ್ಲದೆ ಅತ್ಯಂತ ಹಿಂದುಳಿದ ಜಾತಿ ಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ ಹೋಲಿಸಿದಲಿ ಶೇ. ೧೦ ಕ್ಕಿಂತಲ್ಲೂ ಹೆಚ್ಚಿನ ಬೆಂಬಲವನ್ನು ಈಗಲೂ ಪಡೆದುಕೊಂಡಿರುವುದನ್ನು CSDS ಸರ್ವೇ ಸೂಚಿಸುತ್ತದೆ. ಹೀಗಾಗಿ ಈ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಹಿಂದೂತ್ವವನ್ನು ತಿರಸ್ಕರಿಸಿಲ್ಲ. ಬದಲಿಗೆ ಎಚ್ಚರಿಸಿದ್ದಾರೆ. ವಿರೋಧ ಪಕ್ಷಗಳನ್ನು ಬೆಂಬಲಿಸಿದ್ದಾರೆ. ಆದರೆ ಅಧಿಕಾರಕ್ಕೆ ಬರುವಷ್ಟಲ್ಲ. ಹೀಗಾಗಿ ಈಗ ಬಿಜೆಪಿ ಮತ್ತು ವಿರೋಧ ಪಕ್ಷಗಳೆರಡಕ್ಕೂ ತಿದ್ದುಕೊಳ್ಳುವ ಅವಕಾಶವನ್ನು ಜನರು ಒದಗಿಸಿದ್ದಾರೆ. ಆದರೆ ಇತಿಹಾಸದಲ್ಲಿ ಬಿಜೆಪಿ ಈ ವಿಷಯದಲ್ಲಿ ಕಾಂಗ್ರೆಸ್ಸಿಗಿಂತ ಹೆಚ್ಚು ಪರಿಣಿತ. ಅದರ ಭಾಗವಾಗಿಯೇ ಮೋದಿ ಅಧಿಕಾರ ಸ್ವೀಕರಿಸುವ ಮುನ್ನ ಸಂವಿಧಾನವನ್ನು ತಲೆ ಮೇಲೆ ಹೊತ್ತು ನಾಟಕವಾಡಿದ್ದು. ಇದರ ಉದ್ದೇಶ ಕಳೆದುಕೊಂಡ ದಲಿತ ಮತ್ತು ಅತಿ ಹಿಂದುಳಿದ ಮತಗಳ ಬೇಟೆಯೇ. ಆದರೆ ಅದನ್ನು ಮೋದಿ ಮೋಡಿಯಲ್ಲಿರುವ ಜನರಿಗೆ ವಿವರಿಸಿ ಹೇಳುವಷ್ಟು ಸಂಘಟನಾ ಶಕ್ತಿ, ಬದ್ಧತೆ ..ವಿರೋಧ ಪಕ್ಷಗಳಿಗೆ ಇದೆಯೇ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು..
Leave a reply